
ಹಿರಿಯೂರು :
ಬುದ್ಧನ ಚಿಂತನೆ, ಬಸವಣ್ಣನ ಸಮಾನತೆಯ ತಳಹದಿ ಅಂಬೇಡ್ಕರ್ ಅವರ ಸಮ ಸಮಾಜದ ತತ್ವವನ್ನು ಆಧರಿಸಿದ ದೇಶದ ಬೃಹತ್ ಲಿಖಿತ ಹಾಗೂ ಶ್ರೇಷ್ಠ ಸಂವಿಧಾನವನ್ನು ನೀಡಿದಂತಹ ಕೀರ್ತಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ. ಆರ್. ಅಂಬೇಡ್ಕರ್ ರವರಿಗೆ ಸಲ್ಲುತ್ತದೆ ಎಂಬುದಾಗಿ ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷರಾದ ಎಸ್.ಜಿ.ರಂಗಸ್ವಾಮಿ ಸಕ್ಕರ ಹೇಳಿದರು.
ತಾಲೂಕಿನ ಮಸ್ಕಲ್ ಗ್ರಾಮದ ಭಜನಾ ಮಂದಿರದ ಆವರಣದಲ್ಲಿ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಯುವಕಸಂಘ ಇವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಬಾಬುಜಗಜೀವನ್ ರಾಮ್ ರವರ 119ನೇ ಜನ್ಮದಿನಾಚರಣೆ ಹಾಗೂ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರು ವಿಶ್ವದ 70 ರಾಷ್ಟ್ರಗಳ ಸಂವಿಧಾನವನ್ನು ಅಧ್ಯಯನ ಮಾಡಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ತತ್ವದ ಅಡಿ ಜೀವಪರ ಮತ್ತು ಮನುಷ್ಯತ್ವದ ಪರ ಇರುವ ಸಂವಿಧಾನವನ್ನು ನೀಡಿ ವ್ಯಕ್ತಿಗೌರವ ದೇಶದ ಏಕತೆ ಸಹೋದರತೆಯ ಭಾವವನ್ನು ಬೆಳೆಸಿ ಸಮಗ್ರತೆಯ ಭಾರತವನ್ನು ಕಟ್ಟಿದರು,
ವಿಶೇಷವಾಗಿ ಮಹಿಳೆಯರಿಗೆ ಹಿಂದುಳಿದ ವರ್ಗದವರಿಗೆ ಅಲ್ಪಸಂಖ್ಯಾತರಿಗೆ ತಳಸಮುದಾಯದವರಿಗೆ ಮೀಸಲಾತಿಯನ್ನು ನೀಡಿ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಅಭಿವೃದ್ಧಿಯಾಗಲು ಪ್ರೋತ್ಸಾಹ ನೀಡಿದರು, ಇವರ ತತ್ವ ಆದರ್ಶ ಗಳನ್ನು ಕಷ್ಟಪಟ್ಟ ದಿನಗಳನ್ನು ಮೆಲುಕು ಹಾಕಿದರೆ, ಬದುಕಿನಲ್ಲಿ ಉನ್ನತ ಮಟ್ಟದ ಸಾಧನೆ ಮಾಡಲು ಅಂಬೇಡ್ಕರ್ ಅವರ ಬದುಕು ನಮಗೆಲ್ಲ ದಿಕ್ಸೂಚಿಯಾಗುತ್ತದೆ ಎಂದು ಹೇಳಿದರು.
ತಾಲೂಕು ವಕೀಲರ ಸಂಘದ ಮಾಜಿ ಜಂಟಿ ಕಾರ್ಯದರ್ಶಿ ಕೆ.ರಾಜಪ್ಪ ಮಾತನಾಡಿ, ಡಾ.ಬಾಬುಜಗಜೀವನ್ ರಾಮ್, ಅವರು ಕಡುಬಡತನದಲ್ಲಿ ಹುಟ್ಟಿ ಅವಮಾನ ಅಸ್ಪೃಶ್ಯತೆಯನ್ನು ಅನುಭವಿಸಿ ಶಿಕ್ಷಣವನ್ನು ಪಡೆದು 50 ವರ್ಷಗಳ ಕಾಲ ರಾಜಕೀಯ ರಂಗದಲ್ಲಿ ಸಂಸದರಾಗಿ ಕೇಂದ್ರ ಮಂತ್ರಿಗಳಾಗಿ ಮಾಡಿದಂತಹ ಸೇವೆ ಅನನ್ಯ.
ಇಂಥವರನ್ನ ಒಂದು ಜಾತಿಗೆ ಸೀಮಿತ ಮಾಡಿ ಪ್ರಧಾನಿಯಾಗುವ ಅರ್ಹತೆ ಇದ್ದರೂ ಅದರಿಂದ ತಪ್ಪಿಸಿದ್ದು ದುರ್ದೈವ, ಇಂದು ಅವರು ದೇಶದ ಪ್ರಧಾನಿಯಾಗಿದ್ದರೆ ದಲಿತರ ಬದುಕು, ಬೇರೆ ದಿಕ್ಕಿನಲ್ಲಿಯೇ ಸಾಗುತ್ತಿತ್ತು, ಹಸಿರುಕ್ರಾಂತಿಯ ಹರಿಕಾರರಾಗಿ ದೇಶಕ್ಕೆ ಬಹುದೊಡ್ಡ ಕಾಣಿಕೆ ನೀಡಿದ್ದಾರೆ ಇವರ ಸೇವೆಯನ್ನ ಗುರುತಿಸಿ, ಕೇಂದ್ರ ಸರ್ಕಾರವು ಈಗಲಾದರೂ “ಭಾರತರತ್ನ” ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದರು.
ಈ ಕಾರ್ಯಕ್ರಮವನ್ನು ವ್ಯವಸಾಯ ಸೇವಾ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷರಾದ ಬಿ.ಮೂರ್ತಪ್ಪ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ವಿ.ಎಲ್.ಗೌಡ, .ಎಂ.ಪಿ.ತಿಪ್ಪೇಸ್ವಾಮಿ, ಶಿವಣ್ಣ, ಡಿ.ಸಿ.ಮಂಜುಳಾ, ಯುವ ಮುಖಂಡರಾದ ಡಿ.ಆರ್.ಮಹಾಲಿಂಗಪ್ಪ, ಹೂವಿನ ವ್ಯಾಪಾರಿ ಎಸ್. ಹೆಂಜೇರಪ್ಪ, ಕೆ.ಚಂದ್ರಶೇಖರ, ಎಂ.ರಮೇಶ್. ಡಿ.ಮೂರ್ತಿ. ಸಿ.ಪರಮೇಶ್ವರಪ್ಪ, ಎ.ತಿಮ್ಮಪ್ಪ, ಎಂ.ಶಿವಣ್ಣ, ಶುಭಮೂರ್ತಿ, ಏ.ಎಸ್.ಐ.ವೆಂಕಟೇಶ್, ಕಮಲಮ್ಮ, ಕೆಂಚಮ್ಮ, ಗೋವಿಂದರಾಜು, ಲಕ್ಕಣ್ಣ, ಚಿದಾನಂದ, ಶಿವಣ್ಣಗೌಡ, ರಂಗಸ್ವಾಮಿ, ಲೋಕೇಶ್, ಚಂದ್ರು, ವಿನೋದ, ಹೊರಕೇರಪ್ಪ, ರಕ್ಷಿತ್, ಮಂಜುನಾಥ, ಎ.ಹೊರಕೇರಪ್ಪ, ಗೌಡ, ಕರಿಯಮ್ಮ, ಮಂಜಮ್ಮ, ಗೋವಿಂದಮ್ಮ, ರತ್ನಮ್ಮ, ಮಹಿಳಾ ಸಂಘದ ಪದಾಧಿಕಾರಿಗಳು, ಯುವಕ ಸಂಘದ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
