
ಹಿರಿಯೂರು :
ತಾಲೂಕಿನಲ್ಲಿ ಈಶ ರೈತ ಉತ್ಪಾದಕ ಸಂಸ್ಥೆಯಲ್ಲಿ ತೊಗರಿ ಬೆಳೆದ ರೈತರಿಗೆ ಬೆಂಬಲ ಬೆಲೆಯಲ್ಲಿ ಖರೀದಿಸಲು ನೋಂದಣಿ ಮಾಡಿಕೊಳ್ಳಲು ಸೂಚಿಸಿರುವ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಣೆ ಮಾಡಿದ್ದು, ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂಬುದಾಗಿ ರೈತಸಂಘದ ಜಿಲ್ಲಾ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ತಾಲೂಕಿನ ತೊಗರಿ ನೋಂದಣಿ ಮಾಡಿಕೊಳ್ಳಲು ಈಶ ರೈತ ಉತ್ಪಾದಕ ಸಂಸ್ಥೆಗೆ ನೀಡಿರುವ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರಾದ ಅಶೋಕ್, ಜಿಲ್ಲಾಧಿಕಾರಿಗಳಾದ ಟಿ.ವೆಂಕಟೇಶ್ ಹಾಗೂ ಜಂಟಿ ಕೃಷಿ ನಿರ್ದೇಶಕರಾದ ಮಂಜುನಾಥ್ ರವರಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ಈ ಈಶ ರೈತ ಉತ್ಪಾದಕ ಸಂಸ್ಥೆಯು ಯಾವುದೇ ಸರ್ಕಾರದ ಕೃಷಿ ತೋಟಗಾರಿಕೆ ಮುಂತಾದ ಇಲಾಖೆ ಅಡಿಯಲ್ಲಿ ನೋಂದಣಿ ಆಗಿರುವುದಿಲ್ಲ, ಇದು ವೈಯಕ್ತಿಕ ಸಂಸ್ಥೆ ಆಗಿದ್ದು, ತೊಗರಿ ಬೆಳೆದ ರೈತರು ನೋಂದಣಿ ಮಾಡಿಕೊಳ್ಳಲು ಕೃಷಿ ಇಲಾಖೆಯ ಹೋಬಳಿಯ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಲಿ ಅಥವಾ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳಿಗೆ ನೋಂದಾಯಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದರಲ್ಲದೆ,
ಈಶ ಉತ್ಪಾದಕ ಸಂಸ್ಥೆ ವೈಯಕ್ತಿಕ ಸಂಸ್ಥೆ ಆಗಿರುವುದರಿಂದ ರೈತರು ನೀಡುವ ಆಧಾರ್ ಕಾರ್ಡ್ ವೋಟರ್ ಐಡಿ ಪಾಣಿ ಮುಂತಾದ ದಾಖಲೆಗಳನ್ನು ನೀಡಿದರೆ ದಾಖಲೆಗಳು ದುರುಪಯೋಗ ಆಗಬಹುದು ಆದ್ದರಿಂದ ತಾವುಗಳು ನೀಡಿರುವ ಆದೇಶವನ್ನು ತಕ್ಷಣವೇ ಹಿಂಪಡೆದು ಸರ್ಕಾರದ ಅದೀನದಲ್ಲಿರುವ ಸಂಸ್ಥೆಗಳಿಗೆ ನೋಂದಾಯಿಸಿಕೊಳ್ಳಲು ಆದೇಶವನ್ನು ಮಾರ್ಪಾಡು ಮಾಡಬೇಕು ಎಂಬುದಾಗಿ ಒತ್ತಾಯಿಸಿದರು.
ಒಂದು ವೇಳೆ ವಿಳಂಬವಾದರೆ ಆದೇಶವನ್ನು ರದ್ದುಪಡಿಸದಿದ್ದರೆ ತಮ್ಮ ಇಲಾಖೆಯ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಚಳುವಳಿಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂಬುದಾಗಿ ಅವರು ಎಚ್ಚರಿಸಿದರು.
ಈ ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ, ತಾಲೂಕು ರೈತಸಂಘದ ಅಧ್ಯಕ್ಷರಾದ ಆಲೂರುಸಿದ್ಧರಾಮಣ್ಣ, ಅರಳಿಕೆರೆತಿಪ್ಪೇಸ್ವಾಮಿ, ಹೊಸ್ಕೆರೆಜಯಣ್ಣ, ಜಗದೀಶ್, ರಂಗಸ್ವಾಮಿ, ವೆಂಕಟೇಶ್, ತಿಮ್ಮಯ್ಯ, ರಾಮಕೃಷ್ಣ, ಮೀಸೆರಾಮಣ್ಣ, ಶಿವಣ್ಣ, ಈರಣ್ಣ, ತಿಪ್ಪೇಸ್ವಾಮಿ, ಸಿಂಪಣ್ಣ, ಆರ್.ಕೆ.ಗೌಡ, ಕೃಷ್ಣಪ್ಪ, ರಾಮಣ್ಣ, ನಿಂಗಪ್ಪ, ದೇವರಾಜ್ ಸೇರಿದಂತೆ ಅನೇಕ ರೈತಮುಖಂಡರು ಭಾಗವಹಿಸಿದ್ದರು.

