
ಹಿರಿಯೂರು :
ಲೋಕದಲ್ಲಿ ಸಮಾನತೆ ನೆಲೆಸಬೇಕೆಂಬುದು ಶ್ರೀಕೃಷ್ಣನ ಆಶಯವಾಗಿತ್ತು, ಅಧರ್ಮ ಹೆಚ್ಚಿದಲ್ಲಿ ಧರ್ಮದ ರಕ್ಷಣೆಗಾಗಿ ಯುಗಯುಗದಲ್ಲಿ ಜನ್ಮ ತಾಳಿ ಬರುತ್ತೇನೆ ಎಂಬ ಶ್ರೀಕೃಷ್ಣನ ಸಂದೇಶ ಅಧರ್ಮದ ಹಾದಿಯಲ್ಲಿ ನಡೆಯುವವರಿಗೆ ಎಚ್ಚರಿಕೆ ಗಂಟೆಯಾಗಿದೆ ಎಂಬುದಾಗಿ ತಾಲ್ಲೂಕು ತಹಶೀಲ್ದಾರರಾದ ಎಂ.ಸಿದ್ದೇಶ್ ಹೇಳಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ಹಮ್ಮಿಕೊಳ್ಳಲಾಗಿದ್ದ “ಶ್ರೀಕೃಷ್ಣ ಜನ್ಮಾಷ್ಟಮಿ” ಕಾರ್ಯಕ್ರಮವನ್ನು ಉದ್ಘಾಟಿಸಿ, ನಂತರ ಅವರು ಮಾತನಾಡಿದರು.
ಸಮಾಜದಲ್ಲಿರುವ ಮೇಲುಕೀಲು ಎಂಬ ಭಾವನೆ ಕೊನೆಗೊಳ್ಳಬೇಕು, ಅನ್ಯಾಯ, ಅಧರ್ಮ ಕೊನೆಗೊಳಿಸಿ, ಧರ್ಮವನ್ನು ರಕ್ಷಿಸಲು ಶ್ರೀಕೃಷ್ಣ ತಂತ್ರ ಅನಿವಾರ್ಯ,ಶ್ರೀಕೃಷ್ಣನ ವ್ಯಕ್ತಿತ್ವವನ್ನೇ ಹೊಂದಿರುವ ಗೊಲ್ಲ ಸಮಾಜ ಸರ್ವಾಂಗೀನವಾಗಿ ಅಭಿವೃದ್ಧಿ ಹೊಂದಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬುದಾಗಿ ತಿಳಿಸಿದರು.
ನಗರಸಭೆ ಮಾಜಿ ಸದಸ್ಯ ಚಿತ್ರಜಿತ್ ಯಾದವ್ ಮಾತನಾಡಿ, ಕಾಡುಗೊಲ್ಲರು ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು, ಈ ನಿಟ್ಟಿನಲ್ಲಿ ಕಾಡುಗೊಲ್ಲರಿಗೆ ಜಾತಿಪ್ರಮಾಣಪತ್ರವನ್ನು ತಡಮಾಡದೆ ನೀಡಬೇಕು, ಎಂಬುದಾಗಿ ತಾಲ್ಲೂಕು ತಹಶೀಲ್ದಾರರಿಗೆ ಮನವಿ ಮಾಡಿದರು.
ಉಪನ್ಯಾಸಕ ಜಗನ್ನಾಥ್ ವಿಶೇಷ ಉಪನ್ಯಾಸ ನೀಡಿ, ಮಾತನಾಡಿ, ಶ್ರೀಕೃಷ್ಣಜನ್ಮಾಷ್ಟಮಿ ಕೇವಲ ಹಬ್ಬವಲ್ಲ, ಧರ್ಮದ ಕಾರಾಗೃಹದಲ್ಲಿ ವಿವೇಕ ಮತ್ತು ಧರ್ಮ ಹುಟ್ಟಬೇಕಾದದಿನ, ಕೃಷ್ಣನ ಜೀವನವು ಸಂಕೀರ್ಣತೆಯ ಮಧ್ಯೆ ಧರ್ಮವನ್ನು ಹುಡುಕುತ್ತಾ ದರ್ಶನವನ್ನು ನೀಡುತ್ತದೆ ಎಂಬುದಾಗಿ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಕಾಡುಗೊಲ್ಲ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಿ.ಆರ್.ದಾಸ್ ರಂಗಯ್ಯ ಮಾತನಾಡಿದರು.ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ನಗರ ಠಾಣೆ ಎಸ್.ಐ.ಶಶಿಕಲಾ, ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ರಮೇಶ್, ಗೊಲ್ಲ ಸಂಘದ ತಾಲೂಕು ಘಟಕದ ಅಧ್ಯಕ್ಷ ರಂಗಸ್ವಾಮಿ, ಯಾದವ ಯುವ ವೇದಿಕೆ ಅಧ್ಯಕ್ಷ ಈ.ಮಂಜುನಾಥ್, ಎಸ್.ತಿಮ್ಮಯ್ಯ, ಮೋಹನ್ ಕೃಷ್ಣ, ಕೃಷ್ಣಪ್ಪ, ಚಿತ್ತಯ್ಯ, ಭರತ್ ಮದ್ದನಕುಂಟೆ, ತಿಪ್ಪೇಸ್ವಾಮಿ, ಶ್ರೀನಿವಾಸ್ ರೆಡ್ಡಿ, ಟಿ.ಎಸ್.ಶಶಿಧರ್ ಉಪಸ್ಥಿತರಿದ್ದರು.
