
ಹಿರಿಯೂರು :
ನಮ್ಮ ಕರುನಾಡಿನ ಶ್ರೇಷ್ಠ ಹಬ್ಬಗಳಲ್ಲಿ ಒಂದಾದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಸಡಗರ–ಸಂಭ್ರಮಾ ನಗರದಲ್ಲಿ ಎಲ್ಲೆಲ್ಲೂ ಕಂಡು ಬಂದಿದ್ದು, ನಗರದ ಜನತೆ ಹಬ್ಬಕ್ಕಾಗಿ ಮಾರುಕಟ್ಟೆಯಲ್ಲಿ ಹಣ್ಣು-ಹಂಪಲು, ಹೂಗಳು ಸೇರಿದಂತೆ ಬಾಳೆಕಂದು, ಆಕಾಶಬುಟ್ಟಿ, ದೀಪಗಳು, ಪಟಾಕಿಗಳು ಹಾಗೂ ಹಣತೆಗಳನ್ನು ಕೊಂಡುಕೊಳ್ಳುತ್ತಿರುವ ದೃಶ್ಯ ಕಂಡುಬಂತು.

ಈ ದೀಪಾವಳಿ ಹಬ್ಬಕ್ಕಾಗಿ ಈ ಬಾರಿ ನಗರದ ನೆಹರೂ ಮಾರುಕಟ್ಟೆ ಆವರಣ, ಗಾಂಧಿಸರ್ಕಲ್, ಖಾಸಗಿಬಸ್ ಸ್ಟ್ಯಾಂಡ್, ನೆಹರೂ ಸರ್ಕಲ್, ಹುಳಿಯಾರು ರಸ್ತೆ, ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್, ಗುರುಭವನದ ಮುಂಭಾಗ ಸೇರಿದಂತೆ ಎಲ್ಲೆಲ್ಲೂ ಪುಟ್ ಪಾತ್ ತುಂಬೆಲ್ಲಾ ಹಣ್ಣು-ಹಂಪಲು, ಹೂಗಳು, ದೀಪಗಳು ರಾಶಿ ರಾಶಿ ಹಾಕಲಾಗಿದೆ.
ಈಗಾಗಲೇ ದಸರಾ ಹಬ್ಬ ಮುಗಿದ ನಂತರ ಕುಸಿದಿದ್ದ ಹೂವಿನ ಬೆಲೆ ಇದೀಗ ಚೇತರಿಸಿಕೊಂಡು ಗಗನಕ್ಕೆ ಏರಿಕೆಯಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಹೂವು, ಹಣ್ಣು, ತರಕಾರಿಗಳು ಬಾಳೆಕಂಬ, ಪೂಜಾಸಾಮಾಗ್ರಿಗಳ, ಬೆಲೆ ಏರಿಕೆಯಾಗಿದ್ದರೂ ಸಾರ್ವಜನಿಕರಲ್ಲಿ ಹಬ್ಬದ ಸಡಗರ ಸಂಭ್ರಮ ಒಂದಿಷ್ಟೂ ಕಡಿಮೆಯಾಗಿಲ್ಲ.

ಈ ದೀಪಾವಳಿ ಹಬ್ಬದಲ್ಲಿ ಪ್ರತಿಯೊಬ್ಬರ ಮನೆಯ ಮುಂದೆ ತಳಿರುತೋರಣಗಳಿಂದ ಸಿಂಗರಿಸಿ, ದೀಪಗಳನ್ನು ಬೆಳಗಿಸುವ ಮೂಲಕ ತಮ್ಮ ಮನೆ ಹಾಗೂ ಮನಸ್ಸಿನ ಕತ್ತಲನ್ನು ದೂರಮಾಡಿ, ಬೆಳಕನ್ನು ಪಡೆಯುವ ಈ ಹಬ್ಬದಲ್ಲಿ ಮನೆಯ ಹಿರಿಯರು-ಕಿರಿಯರು ಹೊಸಬಟ್ಟೆ ಹಾಕಿಕೊಂಡು ಸಿಹಿ ಊಟ ಮಾಡಿ, ಪಟಾಕಿ ಸಿಡಿಸಿ, ಸುರುಸುರುಬತ್ತಿ, ಹೂಕುಂಡ, ಭೂಚಕ್ರಗಳನ್ನು ಹಚ್ಚುವ ಮೂಲಕ ಸಡಗರಸಂಭ್ರಮಗಳಿಂದ ಆಚರಿಸುವುದು ಈ ಹಬ್ಬದ ವಿಶೇಷವಾಗಿದೆ.

