
ಹಿರಿಯೂರು:
ನಗರದಲ್ಲಿ ಮೊಹರಾಂ ಹಬ್ಬವನ್ನು ಹಿಂದೂ ಮುಸ್ಲಿಂರು ಎಲ್ಲರೂ ಭಾವೈಕ್ಯತೆಯಿಂದ ಅತ್ಯಂತ ವೈಭವ, ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು. ಅಮವಾಸ್ಯೆ ದಿನ ಪೀರಲು ದೇಗುಲದ ಬಳಿ ಅಲಾಬಿ ಗುಂಡಿ ಹತ್ತಿರ ಹಿಂದೂ- ಮುಸ್ಲಿಮರು ಸೇರಿ ಗುಂಡಿ ಇಸ್ಲಾಂ ಪದ್ಧತಿಗೆ ಅನುಗುಣವಾಗಿ ಗುದ್ಧಲಿ ಪೂಜೆ ನೆರವೇರಿಸಿ ಪೀರಲ್ ಉತ್ಸವಕ್ಕೆ ಚಾಲನೆ ನೀಡಿದರು.
ಇದಾದ ಒಂದು ವಾರಕ್ಕೆ ಪೀರಲು ದೇವರ ಮೂರ್ತಿ ಪ್ರತಿಷ್ಠಾಪಿಸಿದರು. ಮೊಹರಾಂ ದಿನದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಇಷ್ಟಾರ್ಥ ಸಿದ್ದಿಗಾಗಿ ಬರಿಗಾಲಿನಲ್ಲಿ ಅಗ್ನಿಕುಂಡ ಹಾಯುವ ಮೂಲಕ ತಮ್ಮ ಹರಕೆಯನ್ನು ತೀರಿಸಿದರು.

ಹರಕೆ ಹೊತ್ತವರು 1,2,5,10ರೂ ನಾಣ್ಯಗಳನ್ನು ದೇವರಿಗೆ ಸಮರ್ಪಿಸಿದರು. ಕೆಲವರು ಉಪವಾಸ, ಕೆಂಪು ಬಣ್ಣದ ಲಾಡಿ ಕುತ್ತಿಗೆಗೆ ಧರಿಸುವುದರೊಂದಿಗೆ ಹರಕೆ ತೀರಿಸಿದರು. ಕೆಲವರು ಆಕರ್ಷಕ ವೇಷಭೂಷಣಗಳೊಂದಿಗೆ ಗ್ರಾಮದ ಮನೆಮನೆಗೆ ತೆರಳಿ ದವಸ, ಧಾನ್ಯ, ಹಣ ಸಂಗ್ರಹಿಸಿದರು.
ಈ ಮೊಹರಂ ಹಬ್ಬವನ್ನು ಹಿಂದೂ ಮುಸ್ಲಿಂ ಕುಟುಂಬಗಳು ಒಗ್ಗಟ್ಟಾಗಿ ನೂರಾರು ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದಾರೆ. ಈ ನಿಟ್ಟಿನಲ್ಲಿ ಮೊಹರಂ ಹಬ್ಬ ಹಿಂದೂ-ಮುಸ್ಲಿಮರ ಭಾವೈಕ್ಯತೆಯ ಹಬ್ಬವಾಗಿದ್ದು, ನಗರದೆಲ್ಲೆಡೆ ಈ ಹಬ್ಬವನ್ನು ಹಿಂದೂ-ಮುಸ್ಲಿಮರು ಸಡಗರ-ಸಂಭ್ರಮದಿಂದ ಆಚರಿಸಿದರು.
