
ಹಿರಿಯೂರು :
ಬೆಂಗಳೂರಿನಲ್ಲಿ ನನಗೆ ಪರಿಚಿತವಾದ ಅನಿಲ್ ಸುರಾನರವರು ಸರ್ಕಾರಿ ಶಾಲೆಯ ಮಕ್ಕಳಿಗೆ ಗ್ರೀನ್ ಬೋರ್ಡ್ ವಿತರಿಸುವ ಪ್ರಾಜೆಕ್ಟ್ ಹಮ್ಮಿಕೊಂಡಿದ್ದು, ತುಂಬು ಮನಸ್ಸಿನಿಂದ ಹಣದ ನೆರವು ನೀಡಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂಬುದಾಗಿ ರೆಡ್ ಕ್ರಾಸ್ ಸಂಸ್ಥೆ ಛೇರ್ಮನ್ ಹೆಚ್.ಎಸ್.ಸುಂದರ್ ರಾಜ್ ಹೇಳಿದರು.
ನಗರದ ರೋಟರಿ ಸಭಾಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ರೋಟರಿ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿರಿಯೂರು ತಾಲ್ಲೂಕಿನ ಆಯ್ದ ಸರ್ಕಾರಿ ಶಾಲೆಗಳಿಗೆ ಉಚಿತ ಗ್ರೀನ್ ಬೋರ್ಡ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ, ನಂತರ ಅವರು ಮಾತನಾಡಿದರು.

ಯಾವುದೇ ಸಹಾಯವಾದರೂ ಯಾರಿಗೆ ಅರ್ಹತೆಯಿದೆಯೋ, ಯಾರಿಗೆ ಅವಶ್ಯಕತೆಯಿದೆಯೋ ಅವರಿಗೆ ಸಲ್ಲಬೇಕೆಂದು ಅನಿಲ್ ಸುರಾನರವರು ಹೇಳಿದ್ದು, ಅವರ ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸವನ್ನು ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳು ಪ್ರಾಮಾಣಿಕವಾಗಿ ಮಾಡಿದ್ದು, ಅರ್ಹರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿವೆ ಎಂಬುದಾಗಿ ಹೇಳಿದರು.

ಗ್ರೀನ್ ಬೋರ್ಡ್ ದಾನಿಗಳಾದ ಅನಿಲ್ ಸುರಾನ ಮಾತನಾಡಿ, ಹಿರಿಯೂರಿನ ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳು ಹಲವಾರು ಆರೋಗ್ಯ ಶಿಬಿರಗಳನ್ನು ಮಾಡುತ್ತಾ ಜನಪರ, ಜನಸ್ನೇಹಿ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ರಾಜ್ಯಮಟ್ಟದಲ್ಲಿ ಹೆಸರು ಮಾಡಿದೆ, ಮುಂದೆಯೂ ಸಹ ಉತ್ತಮ ಜನಸೇವಾ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಹೆಸರು ಮಾಡಲಿ ಎಂಬುದಾಗಿ ಶುಭಹಾರೈಸಿದರು.

ಇದೇ ಸಂದರ್ಭದಲ್ಲಿ ಸರ್ಕಾರಿ ಬಸ್ ನಿಲ್ದಾಣ ಶಾಲೆಗೆ 3 ಗ್ರೀನ್ ಬೋರ್ಡ್, ಸರ್ಕಾರಿ ಸಕ್ಕರೆ ಕಾರ್ಖಾನೆ ಶಾಲೆಗೆ 2 ಗ್ರೀನ್ ಬೋರ್ಡ್, ಸತ್ಯಸಾಯಿ ಶಾಲೆಗೆ 3 ಗ್ರೀನ್ ಬೋರ್ಡ್ ಸೇರಿದಂತೆ ವಿವಿಧ ಶಾಲೆಗಳಿಗೆ ಗ್ರೀನ್ ಬೋರ್ಡ್ ಗಳನ್ನು ವಿತರಿಸಲಾಯಿತು. ಮತ್ತು ಇದೇ ಸಂದರ್ಭದಲ್ಲಿ ಗ್ರೀನ್ ಬೋರ್ಡ್ ದಾನಿಗಳಾದ ಅನಿಲ್ ಸುರಾನ ಹಾಗೂ ಶ್ರೀಮತಿ ಉಷಾಸುರಾನರವರನ್ನು ಶಾಲು ಹೊದಿಸಿ, ಸನ್ಮಾನಿಸಿ, ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆ ಛೇರ್ಮನ್ ಹೆಚ್.ಎಸ್.ಸುಂದರ್ ರಾಜ್, ವೈಸ್ ಚೇರ್ಮನ್ ಎ.ರಾಘವೇಂದ್ರ, ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ, ಖಜಾಂಚಿ ಸಣ್ಣಭೀಮಣ್ಣ, ರೋಟರಿ ಸಂಸ್ಥೆ ಅಧ್ಯಕ್ಷರಾದ ಕಿರಣ್, ಶ್ರೀಮತಿ ಶಶಿಕಲಾ ರವಿಶಂಕರ್, ಅನಂತರೆಡ್ಡಿಚಿತ್ರದುರ್ಗ, ಎಸ್.ಜೋಗಪ್ಪ, ಎಲ್.ಆನಂದಶೆಟ್ಟಿ, ಬಿ.ಕೆ.ನಾಗಣ್ಣ, ದೇವರಾಜ್ ಮೂರ್ತಿ, ಪಿ.ಆರ್.ಸತೀಶ್ ಬಾಬು, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
