
ಹಿರಿಯೂರು :
ನಮ್ಮ ತಾಲೂಕಿನಲ್ಲಿ ಸ್ವತಂತ್ರ ಪೂರ್ವದಿಂದಲೂ ಸರ್ಕಾರಿ ಶಾಲೆಗಳು ನಡೆಯುತ್ತಿದ್ದು, ಕೆಲವು ಶಾಲೆಗಳು ಇನ್ನು ಖಾತೆ ಆಗದೆ ಇರುವುದು ಕಂಡು ಬಂದಿದೆ, ಹಾಗಾಗಿ ಸರ್ಕಾರಿ ಗೋಮಾಳಾ, ಗ್ರಾಮಠಾಣಾ, ಶಾಲಾ ಜಮೀನಿನ ದಾನಿಗಳ ಹೆಸರಿನಲ್ಲಿರುವ ಆಸ್ತಿಗಳನ್ನು ಸ್ಥಳೀಯ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಲೆ ಹೆಸರಿಗೆ ಖಾತೆ ಮಾಡಬೇಕು ಎಂಬುದಾಗಿ ತಾಲ್ಲೂಕು ಶಿಕ್ಷಣ ಸುಧಾರಣಾ ಸಮಿತಿ ಅಧ್ಯಕ್ಷರಾದ ಅಮೃತೇಶ್ವರಸ್ವಾಮಿ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಹಿರಿಯೂರು ಶಿಕ್ಷಣ ಸುಧಾರಣಾ ಸಮಿತಿ ವತಿಯಿಂದ ಖಾತೆ ಬದಲಾವಣೆ ಆಗದಿರುವ ಸರ್ಕಾರಿ ಶಾಲೆಗಳ ಮುಖ್ಯಸ್ಥರು ಶಾಲೆಯ ಹೆಸರಿಗೆ ಖಾತೆ ಮಾಡಿಸುವ ಕುರಿತು ನಡೆಸಲಾಗುತ್ತಿರುವ ಅಭಿಯಾನಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಸರಿಸುಮಾರು 400 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿದ್ದು, ಸುಮಾರು 150 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಖಾತೆ ಬದಲಾವಣೆಯಾಗಿಲ್ಲ, ಈ ಕೂಡಲೇ ಆದ್ಯತೆ ಮೇರೆಗೆ ಶಾಲೆಯ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಂಡು ಶಾಲಾ ಮಕ್ಕಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಕೆಲಸ ಮಾಡಬೇಕು ಎಂದರಲ್ಲದೆ,

ತಾಲ್ಲೂಕಿನಲ್ಲಿ ಶಿಥಿಲಗೊಂಡಿರುವ ಸರ್ಕಾರಿ ಶಾಲೆಯ ತರಗತಿ ಕೋಣೆಗಳು ಹಾಗೂ ಅಡುಗೆ ಕೋಣೆಗಳ ದುರಸ್ಥಿ ಕಾರ್ಯ ಈ ಕೂಡಲೇ ಆಗಬೇಕಾಗಿದ್ದು, ಈ ಬಗ್ಗೆ ತಾಲ್ಲೂಕು ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕೂಡಲೇ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಶಿಕ್ಷಣ ಸುಧಾರಣಾ ಸಮಿತಿ ವತಿಯಿಂದ ಕ್ರಮಕೈಗೊಳ್ಳಲಾಗುತ್ತಿದೆ ಎಂಬುದಾಗಿ ಹೇಳಿದರು.

ಈ ಸಭೆಯಲ್ಲಿ ತಾಲ್ಲೂಕು ಶಿಕ್ಷಣ ಸುಧಾರಣಾ ಸಮಿತಿ ನಾಮ ನಿರ್ದೇಶನ ಸದಸ್ಯರುಗಳಾದ ನಾಗೇಂದ್ರ ನಾಯ್ಕ್, ಅಂಜಿನಪ್ಪ, ನಹೀಂ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ, ಉಪ ತಹಶೀಲ್ದಾರರಾದ ಕೆ.ಎಂ.ತಿಪ್ಪೇಸ್ವಾಮಿ, ಭೂಮಾಪನ ಅಧಿಕಾರಿಗಳಾದ ಲಕ್ಷ್ಮಿನರಸಿಂಹಯ್ಯ, ಕಂದಾಯ ಇಲಾಖೆ ಅಧಿಕಾರಿಗಳು, ಸರ್ಕಾರಿ ಭೂ ಮಾಪಕರು, ಪರವಾನಗಿ ಭೂಮಾಪಕರು, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

