
ಹಿರಿಯೂರು :
ನಗರದಲ್ಲಿರುವ ನಂದಿ ಬೇಕರಿಯವರು ಈಗಾಗಲೇ 3 ರಿಂದ 4 ಬಾರಿ ಎಚ್ಚರಿಕೆ ನೀಡಿದ್ದರೂ ಸಹ ಕಸವನ್ನು ರಸ್ತೆಗೆ ಹಾಕುತ್ತಿರುವುದರಿಂದ ರಸ್ತೆಯ ಕಸವನ್ನು ಅವರ ಅಂಗಡಿ ಮುಂದೆಯೇ ಹಾಕಿಸಿ ಅವರ ಕೈಯಲ್ಲಿಯೇ ತುಂಬಿಸುವ ಜೊತೆಗೆ 2 ಸಾವಿರ ರೂಗಳ ದಂಡವನ್ನು ವಿಧಿಸುವ ಕೆಲಸವನ್ನು ನಗರಸಭೆ ವತಿಯಿಂದ ಮಾಡಲಾಗುತ್ತಿದೆ ಎಂಬುದಾಗಿ ನಗರಸಭೆಯ ಆರೋಗ್ಯ ನಿರೀಕ್ಷಕರಾದ ಶ್ರೀಮತಿ ಸಂಧ್ಯಾ ಹೇಳಿದರು.
ನಗರದ ವ್ಯಾಪ್ತಿಯ ವಾರ್ಡ್ ನಂ 26ರ ಹುಳಿಯಾರು ರಸ್ತೆಯಲ್ಲಿರುವ ನಂದಿ ಬೇಕರಿ ಅಂಗಡಿ ಮಾಲೀಕರು ಕಸವನ್ನು ರಸ್ತೆಗೆ ಹಾಕುತ್ತಿರುವುದನ್ನು ವಿರೋಧಿಸಿ, ನಗರಸಭೆ ವತಿಯಿಂದ ಬೇಕರಿಯ ಮಾಲೀಕರ ವಿರುದ್ಧ ಸೂಕ್ತ ಕಾರ್ಯಾಚರಣೆಯನ್ನು ನಡೆಸಿ, ನಂತರ ಅವರು ಮಾತನಾಡಿದರು.

ಸಾರ್ವಜನಿಕರು ಕಸವನ್ನು ರಸ್ತೆಗೆ ಹಾಕಬಾರದೆಂಬ ಉದ್ದೇಶದಿಂದ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಂಡಿದ್ದು, ನಗರದ ನಾಗರೀಕರು ಯಾರೇ ಆದರೂ ನಗರದ ಸ್ವಚ್ಛತೆಯ ಬಗ್ಗೆ ಗಮನ ಹರಿಸದಿದ್ದರೆ, ನಗರಸಭೆಯ ನಿಯಮಗಳಿಗೆ ಸ್ಪಂದಿಸದಿದ್ದರೆ ಅಂತಹವರ ವಿರುದ್ಧ ಸೂಕ್ತಕ್ರಮಕೈಗೊಳ್ಳಬೇಕಾಗುತ್ತದೆ ಎಂಬುದಾಗಿ ಎಚ್ಚರಿಸಿದರು.

ಆರೋಗ್ಯ ನಿರೀಕ್ಷಕರಾದ ಅಶೋಕ್ ಕುಮಾರ್ ಮಾತನಾಡಿ, ಸಾರ್ವಜನಿಕರು ಕಸವನ್ನು ರಸ್ತೆಗೆ ಚಲ್ಲದೆ ನಗರಸಭೆಯ ಗಾಡಿಗೆ ಹಾಕಬೇಕು, ತಪ್ಪಿದ್ದಲ್ಲಿ ಮುಂದೆ ಇನ್ನು ವಿಧ ವಿಧ ವಾದ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುವುದು, ದಂಡ ವಿಧಿಸಲಾಗುವುದು ಮತ್ತು ಕಾನೂನು ರಿತ್ಯ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆಯ ಆರೋಗ್ಯ ನಿರೀಕ್ಷಕರುಗಳಾದ ಶ್ರೀಮತಿ ಸಂಧ್ಯಾ, ಅಶೋಕ್ ಕುಮಾರ್, ನಯಾಜ್, ಷರೀಫ್ ಸೇರಿದಂತೆ ನಗರಸಭೆಯ ಪೌರಕಾರ್ಮಿಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

