
ಹಿರಿಯೂರು :
ಚಿತ್ರದುರ್ಗ ಜಿಲ್ಲೆಯಲ್ಲಿ 140 ಗ್ರಾಮ ಗ್ರಂಥಾಲಯಗಳನ್ನು ಪ್ರಾರಂಭಿಸಲು ಮಾನ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿ.ಪಿ.ಎಲ್.ಪಿ ಮಹಿಳೆಯರನ್ನು ಆಯ್ಕೆ ಮಾಡಲು ಆದೇಶ ನೀಡಲಾಗಿದೆ ಎಂಬುದಾಗಿ ತಾಲೂಕು ಸಾಕ್ಷರತಾ ಮಾಜಿ ಸಂಯೋಜಕರಾದ ಕೆ.ಜಿ.ಹನುಮಂತರಾಯ ತಿಳಿಸಿದ್ದಾರೆ.
ಈ ಆದೇಶದಲ್ಲಿ ಪಿಯುಸಿ ಉತ್ತೀರ್ಣರಾಗಿರಬೇಕು ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಎಂದು ಆದೇಶದಲ್ಲಿ ತಿಳಿಸಿರುತ್ತಾರೆ. ಸುಮಾರು 15 ರಿಂದ 20 ವರ್ಷಗಳ ಕಾಲ ವಿವಿಧ ಸಾಕ್ಷರತಾ ಕಾರ್ಯಕ್ರಮಗಳಲ್ಲಿ ಸಾಕ್ಷರತಾ ಪ್ರೇರಕರಾಗಿ ಕಾರ್ಯನಿರ್ವಹಿಸಿದ ನಮ್ಮ ಪ್ರೇರಕರು ಇದರಿಂದ ವಂಚಿತರಾಗಿದ್ದಾರೆ.
ಈ ಹಿಂದೆ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಆಯ್ಕೆಯಲ್ಲಿ ಮೊದಲ ಆದ್ಯತೆ ಸಾಕ್ಷರತಾ ಪ್ರೇರಕರಿಗೆ ನೀಡುತ್ತಿದ್ದು ಮತ್ತು ಸಾಕ್ಷರತಾ ಕಾರ್ಯಕ್ರಮದಲ್ಲಿ ಕೆಲಸ ನಿರ್ವಹಿಸಿದಂತ ಪ್ರೇರಕರಿಗೆ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಕೊಡಲು ಮೊದಲ ಆದ್ಯತೆ ನೀಡಲು ಕ್ಯಾಬಿನೆಟ್ ನಲ್ಲಿ ತೀರ್ಮಾನಿಸಲಾಗಿತ್ತು.
ಇಂಥ ಸಂದರ್ಭದಲ್ಲಿ ಈಗ ಗ್ರಾಮ ಗ್ರಂಥಾಲಯಗಳನ್ನು ಪ್ರಾರಂಭಿಸುವಾಗ ನಮ್ಮ ಸಾಕ್ಷರತಾ ಪ್ರೇರಕರಿಗೆ ಯಾವುದೇ ಪ್ರಾತಿನಿತ್ಯ ನೀಡದೆ ಪಿಯುಸಿ ಉತ್ತೀರ್ಣರಾಗಿಲ್ಲ ಎಂಬ ಕಾರಣಕ್ಕೆ ಅವರನ್ನು ಪರಿಗಣಿಸದೆ ಬೇರೆ ಕಾರ್ಯಕರ್ತರನ್ನ ಜಿಪಿಎಲ್.ಪಿ ಮಹಿಳೆಯರನ್ನ ನಮ್ಮ ಜಿಲ್ಲೆಯಲ್ಲಿ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಆಯ್ಕೆ ಮಾಡಿರುವುದು ನನ್ನ ಗಮನಕ್ಕೆ ಬಂದಿರುತ್ತದೆ.
ಆದ ಪ್ರಯುಕ್ತ ತಾವುಗಳು ಇದನ್ನ ಪರಿಶೀಲಿಸಿ ಎಸ್.ಎಸ್.ಎಲ್.ಸಿ ಪಾಸಾದ ಮತ್ತು ಸಾಕ್ಷರತಾ ಕಾರ್ಯಕ್ರಮದಲ್ಲಿ ಕೆಲಸ ಮಾಡಿದ ಸಾಕ್ಷರತಾ ಪ್ರೇರಕರಿಗೆ ಮೊದಲ ಆದ್ಯತೆ ನೀಡಿ ಅವರನ್ನ ಆಯ್ಕೆ ಮಾಡಿಕೊಂಡು ನಮ್ಮ ಸಾಕ್ಷರತಾ ಕಾರ್ಯಕರ್ತರಿಗೆ ನ್ಯಾಯ ದೊರಕಿಸಿಕೊಡಲು ಕೆ.ಜಿ.ಹನುಮಂತರಾಯ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಾಕ್ಷರತಾ ಪ್ರೇರಕರ ಸಂಘದ ಜಿಲ್ಲಾಧ್ಯಕ್ಷರಾದ ರಾಜಣ್ಣ ಇವರು ಕೂಡ ಹಾಜರಿದ್ದು, ಈ ಬಗ್ಗೆ ಈ ಹಿಂದೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಧಿಕಾರಿಗಳಿಗೆ ಮನವಿಯನ್ನು ಕೂಡ ಸಲ್ಲಿಸಿದ್ದು, ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ನಮ್ಮ ಸಾಕ್ಷರತಾ ಕಾರ್ಯಕರ್ತರಿಗೆ ಅನ್ಯಾಯವಾಗಿರುವುದನ್ನ ಸರಿಪಡಿಸಬೇಕು ಎಂಬುದಾಗಿ ಅವರು ಮನವಿ ಮಾಡಿದ್ದಾರೆ.
