
ಹಿರಿಯೂರು :
ತಾಲ್ಲೂಕಿನ ಜೆಜೆ ಹಳ್ಳಿ ಹೋಬಳಿಯ ಕಲ್ವಳ್ಳಿ ಭಾಗದ ಗಾಯತ್ರಿ ಜಲಾಶಯ ಸೇರಿ 16 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ಸಚಿವ ಸಂಪುಟ ಅನುಮೋದನೆ ನೀಡಿ ಎರಡು ತಿಂಗಳಾದರೂ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸದೆ ನಿರ್ಲಕ್ಷ್ಯ ವಹಿಸಿರುವುದು ನಿಜಕ್ಕೂ ವಿಷಾದನೀಯ ಸಂಗತಿ ಎಂಬುದಾಗಿ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
ನಗರದ ರೈತಸಂಘದ ಕಚೇರಿಯಲ್ಲಿ ರೈತರ ಸಭೆ ಕರೆಯಲಾಗಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಸಬಾ ಹಾಗೂ ಐಮಂಗಳ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ಪ್ರಾಯೋಗಿಕ ನೀರು ಹರಿಸುತ್ತೇವೆ ಎಂದು ಐದಾರು ತಿಂಗಳಿನಿಂದ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ ಪ್ರಸ್ತುತ ಸಂದರ್ಭದಲ್ಲಿ ಮೂರು ಹೋಬಳಿಯಲ್ಲಿ ಕುಡಿಯುವ ನೀರಿಗೆ ಆಹಾಕಾರ ಉಂಟಾಗಿ ಜನಜಾನುವಾರುಗಳಿಗೆ ತುಂಬಾ ಅನಾನುಕೂಲವಾಗಿದೆ
ಆದ್ದರಿಂದ ಕೇಂದ್ರ ಸರ್ಕಾರ ಘೋಷಿಸಿರುವ 5300 ಕೋಟಿ ಹಣವನ್ನು ತುರ್ತಾಗಿ ಬಿಡುಗಡೆ ಮಾಡಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಪೂರ್ಣಗೊಳಿಸಿ ಕೆರೆಗಳಿಗೆ ತುರ್ತಾಗಿ ನೀರು ತುಂಬಿಸಬೇಕು ಎಂದು ಒತ್ತಾಯಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಮಾವೇಶದ ಮೂಲಕ ರೈತರ ಅಕ್ಕೊತ್ತಯ ಮಂಡಿಸಲು ಸೆಪ್ಟಂಬರ್ 7 ರ ಸೋಮವಾರ ನೆಹರು ಮೈದಾನದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಸೇರಿ ಜಿಲ್ಲಾ ಮಟ್ಟದ ಸಮಾವೇಶ ನಡೆಸಲು ಸಭೆಯಲ್ಲಿ ತೀರ್ಮಾನಿಸಿದೆ ಎಂದರು.
ಈ ಸಮಾವೇಶಕ್ಕೆ ರಾಜ್ಯ ನಾಯಕರಾದ ಚುಕ್ಕಿನಂಜುಂಡಸ್ವಾಮಿ, ಕೆ.ಟಿ.ಗಂಗಾಧರ್, ಹೊನ್ನೂರ್ ಪ್ರಕಾಶ್, ಮಂಜು, ಕಿರಣ್, ಚೂನಪ್ಪ ಪೂಜಾರಿ, ಶಶಿಕಾಂತ್ ಗುರೂಜಿ ಇವರುಗಳನ್ನು ಸಮಾವೇಶಕ್ಕೆ ಆಹ್ವಾನಿಸಲಾಗುವುದು ಎಂದು ಸಭೆಗೆ ತಿಳಿಸಿದರು.
ಈ ಸಭೆಯಲ್ಲಿ ತಾಲೂಕು ಅಧ್ಯಕ್ಷ ವೆಂಕಟೇಶ್, ವೀರಣ್ಣ ಗೌಡ, ನಂದಿಹಳ್ಳಿ ರಂಗಸ್ವಾಮಿ, ರಾಮಣ್ಣ, ಮೀಸೆಗೌಡ, ಸಣ್ಣತಿಮ್ಮಣ್ಣ, ನಿಂಗಪ್ಪ, ಈರಣ್ಣ, ವಜೀರ್ ಸಾಬ್, ಶಿವಣ್ಣ, ಮಂಜುನಾಥ್, ರಾಮಕೃಷ್ಣ ಸೇರಿದಂತೆ ಅನೇಕರು ಭಾಗವಹಿಸಿದ್ದರು.
