
ಹಿರಿಯೂರು:
ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಯುವಜನಾಂಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತವಾಗಿ ಅತ್ಯುತ್ತಮ ಪುಸ್ತಕಗಳ ಗ್ರಂಥಾಲಯ ಸೇವೆಯನ್ನು ಒದಗಿಸಲಾಗುತ್ತಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ಉದ್ಯೋಗಾಕಾಂಕ್ಷಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂಬುದಾಗಿ ಡಿ.ವೈ.ಎಸ್.ಪಿ ಶಿವಕುಮಾರ್ ಹೇಳಿದರು.

ನಗರದ ನಗರಸಭೆ ಕಾರ್ಯಾಲಯದ ಮುಂಭಾಗದಲ್ಲಿ ರೂರಲ್ “ಎಜುಕೇಷನ್ ಡೆವಲಪ್ ಮೆಂಟ್ ಸಂಸ್ಥೆ” [ರೆಡ್ ಫೌಂಡೇಶನ್] ವತಿಯಿಂದ ಪ್ರಾರಂಭಿಸಲಾದ “ನೂತನ ಗ್ರಂಥಾಲಯ” ವನ್ನು ಉದ್ಘಾಟಿಸಿ, ನಂತರ ಅವರು ಮಾತನಾಡಿದರು.

ಮನೆಯಲ್ಲಿ ಮೊಬೈಲ್ ಹಿಡಿದು ಕಾಲ ವ್ಯರ್ಥ ಮಾಡುವ ಬದಲು “ಎಜುಕೇಷನ್ ಡೆವಲಪ್ ಮೆಂಟ್ ಸಂಸ್ಥೆ” ಗ್ರಂಥಾಲಯದಲ್ಲಿ ಲಭ್ಯವಿರುವ ಅತ್ಯುತ್ತಮ ಪುಸ್ತಕಗಳು ಹಾಗೂ ಜ್ಞಾನಸಂಪತ್ತಿನ ಸದುಪಯೋಗವನ್ನು ಸಾರ್ವಜನಿಕರು ಮತ್ತು ಯುವಜನತೆ ಗರಿಷ್ಠ ಪ್ರಮಾಣದ ಲಾಭವನ್ನು ಪಡೆದುಕೊಳ್ಳಬೇಕು ಎಂಬುದಾಗಿ ಕರೆ ನೀಡಿದರು.

ಸಂಸ್ಥೆಯ ಕಾರ್ಯದರ್ಶಿ ಕೆ.ಅಂಬಿಕಾ ಮಾತನಾಡಿ, ಸಮಾಜದ ಅಭಿವೃದ್ಧಿಗಾಗಿ ಏನಾದರೂ ಸೇವೆ ಸಲ್ಲಿಸಬೇಕೆಂಬ ಉದ್ದೇಶದಿಂದ ಈ ಸಂಸ್ಥೆ ಆರಂಭಿಸಿದ್ದು, ಮೊದಲ ಹೆಜ್ಜೆಯಾಗಿ ಗ್ರಂಥಾಲಯ ಆರಂಭಿಸಲಾಗಿದೆ, ಮುಂದಿನ ದಿನಗಳಲ್ಲಿ ತಜ್ಞರ ಸಲಹೆ ಪಡೆದು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಡಿವೈಎಸ್.ಪಿ. ಶಿವಕುಮಾರ್, ಹಿರಿಯೂರು ಸಿಪಿಐ ಗುಡ್ಡಪ್ಪ ಹಾಗೂ ನಗರ ಪೊಲೀಸ್ ಇನ್ಸೆಕ್ಟರ್ ಮಹಮ್ಮದ್ ಸಿರಾಜ್, ಸಂಸ್ಥೆಯ ಅಧ್ಯಕ್ಷರಾದ ಜಿ.ರಾಮಕೃಷ್ಣ, ಕಾರ್ಯದರ್ಶಿ ಕೆ.ಅಂಬಿಕಾ, ಖಜಾಂಚಿ ಎಂ.ದಯಾನಂದ್, ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.
