
ಹಿರಿಯೂರು :
ನಮಗೆ ಈ ಸ್ವಾತಂತ್ರ್ಯ ಸುಲಭವಾಗಿ ದೊರೆತದ್ದಲ್ಲ, ನೂರಾರು ವರ್ಷಗಳು ಬ್ರಿಟೀಷರ ದಾಸ್ಯದಲ್ಲಿದ್ದ ನಮ್ಮ ದೇಶ ಸ್ವಾತಂತ್ರ್ಯ ಹೋರಾಟಗಾರರ ಅಸಂಖ್ಯಾತ ದೇಶಪ್ರೇಮಿಗಳ ತ್ಯಾಗ ಬಲಿದಾನಗಳ ಪರಿಶ್ರಮದಿಂದ 1947ರಲ್ಲಿ, ಸ್ವಾತಂತ್ರ್ಯ ಗಳಿಸಿತು, ಅಸಂಖ್ಯಾತ ದೇಶಪ್ರೇಮಿಗಳು, ಮಹಾನ್ ನಾಯಕರು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ್ದಾರೆ ಎಂಬುದಾಗಿ ತಾಲ್ಲೂಕು ತಹಶೀಲ್ದಾರರಾದ ಎಂ.ಸಿದ್ದೇಶ್ ಹೇಳಿದರು.

ನಗರದ ನೆಹರು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 80ನೇ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಈ ದೇಶವನ್ನು ಬ್ರಿಟೀಷರ ದಾಸ್ಯದ ಸಂಕೋಲೆಗಳಿಂದ ಬಿಡುಗಡೆಗೊಳಿಸಲು ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ನೇತಾಜಿಸುಭಾಷ್ ಚಂದ್ರಬೋಸ್, ಸರ್ದಾರವಲ್ಲಭಾಯಿಪಟೇಲ್, ಬಾಲಗಂಗಾಧರತಿಲಕ್, ಭಗತಸಿಂಗ್, ಚಂದ್ರಶೇಖರಆಜಾದರಂತಹ ಸಹಸ್ರಾರು ದೇಶಪ್ರೇಮಿಗಳು, ನೂರಾರು ದೇಶಭಕ್ತರು ಈ ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ, ಅಪಾರ ದೇಶಪ್ರೇಮ ಮೆರೆದಿದ್ದಾರೆ ಎಂದರಲ್ಲದೆ,

ಸಮಾಜದ ಎಲ್ಲಾ ವರ್ಗದ ಜನರು ಮತ್ತು ಮಹಿಳೆಯರು, ಮಕ್ಕಳು ಸಹ ಈ ಸ್ವಾತಂತ್ರ್ಯ ಹೋರಾಟಕ್ಕಾಗಿ ಅವಿರತ ಶ್ರಮಿಸಿದ್ದಾರೆ, ಇವರೆಲ್ಲರ ತ್ಯಾಗ ಮತ್ತು ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯಕ್ಕೆ ಇಂದು ನಾವು ಬೆಲೆ ಕಟ್ಟಲು ಸಾಧ್ಯವಿಲ್ಲ, ಆದರೆ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಎಲ್ಲಾ ಮಹಾನೀಯರನ್ನು ನಾವು-ನೀವೆಲ್ಲಾ ಕೃತಜ್ಞತಾಪೂರ್ವಕವಾಗಿ ಸ್ಮರಿಸಬೇಕಾಗಿದೆ ಎಂಬುದಾಗಿ ಅವರು ಹೇಳಿದರು.

ನಮ್ಮ ತಾಲ್ಲೂಕಿನ ಜನರೂ ಸಹ ಈ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದ್ದು, ತಾಲ್ಲೂಕಿನ ಮರಡಿಹಳ್ಳಿ ಹಾಗೂ ಕೆ.ಆರ್.ಹಳ್ಳಿ ಗ್ರಾಮಗಳು ಪ್ರಮುಖ ಹೋರಾಟ ಕೇಂದ್ರಗಳಾಗಿದ್ದವು, ಇಂದಿಗೂ ಜೀವಂತವಾಗಿರುವ ಕೋವೇರಹಟ್ಟಿ ಗ್ರಾಮದ ಗೋವಿಂದಪ್ಪ, ಮರಡಿಹಳ್ಳಿ ಗ್ರಾಮದ ಭೀಮಪ್ಪ, ಇವರುಗಳು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಹ ಭಾಗವಹಿಸಿದ್ದು, ಸ್ವಾತಂತ್ರ್ಯೋತ್ಸವದ ಅಂಗವಾಗಿ ತಾಲ್ಲೂಕು ಆಡಳಿತದ ವತಿಯಿಂದ ಅವರಿಗೆ ಸನ್ಮಾನಿಸಲಾಗಿದೆ,

ತಾಲ್ಲೂಕಿನಲ್ಲಿ ಈ ಬಾರಿ ಮಳೆ ಕೊರತೆಯಿಂದಾಗಿ ಬರಗಾಲ ಆವರಿಸಿದ್ದು, ಬರಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಲಾಗಿದ್ದು, ತಾಲ್ಲೂಕಿನ ಬರ ಪರಿಸ್ಥಿತಿಯ ಗಂಭೀರತೆಯನ್ನು ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ವತಿಯಿಂದ ಘನ ಸರ್ಕಾರದ ಗಮನಕ್ಕೆ ತರಲಾಗಿದೆ ಎಂಬುದಾಗಿ ಅವರು ಹೇಳಿದರು.

ನಮ್ಮ ಕರ್ನಾಟಕ ಸರ್ಕಾರವು ಈ ವರ್ಷದಲ್ಲಿ ರಾಜ್ಯದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನಮ್ಮ ತಾಲ್ಲೂಕಿನಲ್ಲಿ ಅನ್ನಭಾಗ್ಯ ಯೋಜನೆಯಡಿ 2,40,827 ಜನರಿಗೆ ಉಚಿತ ಅಕ್ಕಿ, ಗೃಹಲಕ್ಷ್ಮೀ ಯೋಜನೆಯಡಿ 70238, ಜನರಿಗೆ 2ಸಾವಿರಹಣ, ಗೃಹಜ್ಯೋತಿ ಯೋಜನೆಯಡಿ 46276 ಫಲಾನುಭವಿಗಳಿಗೆ ಉಚಿತ ವಿದ್ಯುತ್ ಪೂರೈಸಲಾಗುತ್ತಿದ್ದು, ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಲಾಗಿದೆ ಎಂದರಲ್ಲದೆ,

ರಾಜ್ಯದ ಯುವಪದವೀಧರರಿಗೆ ಯುವನಿಧಿ ಯೋಜನೆಯಡಿ ಪದವೀಧರ ನಿರುದ್ಯೋಗಿಗಳಿಗೆ 3 ಸಾವಿರ, ಡಿಪ್ಲೋಮೋ ಪದವೀಧರರಿಗೆ 1500 ಸಹಾಯಧನ ನೀಡಲಾಗುತ್ತಿದೆ, ಅಲ್ಲದೆ ಕರ್ನಾಟಕ ಸರ್ಕಾರ ಮತ್ತು ರಾಜ್ಯ ಪೋಲೀಸ್ ಇಲಾಖೆ ಯುವಜನತೆಯನ್ನು ಮಾದಕವಸ್ತುಗಳ ಜಾಲದಿಂದ ರಕ್ಷಿಸಲು ಜಂಟಿಯಾಗಿ :ಡ್ರಗ್ಸ್ ಬೇಡ ಬ್ರೋ” ಎಂಬ ಅಭಿಯಾನ ಆರಂಭಿಸಿದ್ದು, ಯುವಪೀಳಿಗೆಯನ್ನು ಮಾದಕದ್ರವ್ಯ ವ್ಯಸನದಿಂದ ದೂರವಿಡುವ ಕಾರ್ಯಕ್ರಮವಾಗಿರುತ್ತದೆ ಎಂದರು.

ಮತದಾರರ ಪಟ್ಟಿಯನ್ನು ಅತ್ಯಂತ ಅತ್ಯಂತ ನಿಖರವಾಗಿ ಪರಿಷ್ಕರಿಸಲು ಹಮ್ಮಿಕೊಂಡಿರುವ ಎಸ್.ಐ.ಆರ್ ಬೃಹತ್ ಅಭಿಯಾನ 2026ರ ಜೂನ್, ಜುಲೇ, ಆಗಸ್ಟ್ ಬಿರುಸಿನಿಂದ ನಡೆದಿದ್ದು, ಬಿ.ಎಲ್.ಓ ಗಳು ಪ್ರತಿಯೊಬ್ಬರ ಮನೆಗೆ ಭೇಟಿ ನೀಡಿ, ವಿವರ ಸಂಗ್ರಹಿಸಿದ್ದಾರೆ, ತಾಲ್ಲೂಕಿನ ವ್ಯಾಪ್ತಿಯಲ್ಲಿ ಶೇ.88.24 ರಷ್ಟು ಮತದಾರರ ಮಾಹಿತಿ ಸಂಗ್ರಹಣೆ ಪೂರ್ಣಗೊಳಿಸಲಾಗಿದ್ದು, ಶೇ.11.76ರಷ್ಟು ಬಾಕಿಇದ್ದು, ಶೇ.100ರಷ್ಟು ಡಿಜಿಟಲೀಕರಣ ಯಶಸ್ವಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಪೋಲೀಸ್ ಇಲಾಖೆ ಹಾಗೂ ಹೋಂಗಾರ್ಡ್ಸ್ ಸಿಬ್ಬಂದಿಗಳು ಹಾಗೂ ಪುರಸಭೆ ನೌಕರರು ಸೇರಿದಂತೆ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ಕಾರ್ಯಕ್ರಮ ನಡೆಸಲಾಯಿತು. ರಾಷ್ಟ್ರೀಯ ಅಕಾಡೆಮಿ ಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಅಸಂಷನ್ ಕನ್ನಡ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ನಡೆಸಿಕೊಡಲಾಯಿತು.

ಈ ಕಾರ್ಯಕ್ರಮದಲ್ಲಿ ಪೋಲೀಸ್ ಉಪಾಧೀಕ್ಷರಾದ ಟಿ.ಎಂ.ಶಿವಕುಮಾರ್, ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಡಾ.ಜಿ.ಕೆ.ಪ್ರಮೋದ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ, ಪೋಲೀಸ್ ಇನ್ಸ್ ಪೆಕ್ಟರ್ ಮಹಮ್ಮದ್ ಸೀರಾಜ್, ಐಮಂಗಲ ಸರ್ಕಲ್ ಇನ್ಸ್ ಪೆಕ್ಟರ್ ಗುಡ್ಡಪ್ಪ, ಶಿಕ್ಷಣ ಸಂಯೋಜಕರುಗಳಾದ ಎಂ.ಕೆ.ಸಯ್ಯದ್ ಜಾಫರ್ ಸಾಧಿಕ್, ಶಿವಾನಂದ್, ತಾಲ್ಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷರಾದ ಟಿ.ಕೃಷ್ಣಮೂರ್ತಿ, ತಾಲ್ಲೂಕು ಶಿಕ್ಷಣ ಸುಧಾರಣಾ ಸಮಿತಿ ಅಧ್ಯಕ್ಷರಾದ ಎ.ಎಂ.ಅಮೃತೇಶ್ವರಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಆರ್.ರಮೇಶ್, ನಗರಸಭೆ ಸದಸ್ಯರುಗಳಾದ ಶ್ರೀಮತಿ ಶಿವರಂಜಿನಿಯಾದವ್, ಶ್ರೀಮತಿ ರತ್ನಮ್ಮ, ಅಯೂಬ್ ಖಾನ್, ರಾಜ್ಯ ರೈತಸಂಘದ ರೈತಮುಖಂಡರುಗಳಾದ ಕೆ.ಸಿ.ಹೊರಕೇರಪ್ಪ, ಕೆ.ಟಿ.ತಿಪ್ಪೇಸ್ವಾಮಿ, ತಾ.ಪಂ.ಮಾಜಿ ಅಧ್ಯಕ್ಷ ಟಿ.ಆರ್.ಗೋಪಾಲ್, ತಾ.ಪಂ.ಸದಸ್ಯರುಗಳಾದ ಗುರುಪ್ರಸಾದ್, ಬಗರ್ ಹುಕುಂ ಸಮಿತಿ ಡಾ.ಸುಜಾತ, ಚಾಲಕರ ಸಂಘದ ಅಧ್ಯಕ್ಷ ದಾದಾಪೀರ್, ಮಾಜಿ ಪುರಸಭೆ ಸದಸ್ಯ ದಿವಾಕರ್ ನಾಯಕ್, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಆಲೂರು ಹನುಮಂತರಾಯಪ್ಪ, ಉಪಾಧ್ಯಕ್ಷರಾದ ಪಿ.ಆರ್.ಸತೀಶ್ ಬಾಬು, ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷರಾದ ರಾಮಚಂದ್ರಪ್ಪ, ಮುಖಂಡರುಗಳಾದ ರಾಘವೇಂದ್ರ, ಸಿಕಂದರ್, ಸ್ಕೌಟ್ಸ್ ಅಂಡ್ ಗೈಡ್ಸ್ ಹೆಚ್.ಎಸ್.ಸುಂದರ್ ರಾಜ್, ನಾಗಸುಂದರಮ್ಮ, ಸೇರಿದಂತೆ ಅನೇಕ ಗಣ್ಯರು ನಗರದ ನಾಗರೀಕರು, ನಗರಸಭೆ ಹಾಗೂ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ನೌಕರರು ಸಿಬ್ಬಂದಿವರ್ಗ, ಶಾಲಾ ಶಿಕ್ಷಕ –ಶಿಕ್ಷಕಿಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ ಸ್ವಾಗತಿಸಿದರು. ಸೇವಾದಳದ ಶಶಿಧರ್ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.
