
ಚಿತ್ರದುರ್ಗ :
ತಾಲ್ಲೂಕಿನ ಕಸಬಾ ಹೋಬಳಿ, ವಾಣಿವಿಲಾಸಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭರಮಗಿರಿ ಕೆರೆ ಸುತ್ತಮುತ್ತ ಇರುವ ಕೊಳವೆಬಾವಿಗಳ ಪುನಶ್ಚೇತನ ಹಾಗೂ ವಿದ್ಯುದೀಕರಣ ಕಾಮಗಾರಿಗಾಗಿ ₹1.25 ಕೋಟಿ ಅನುದಾನ ಮಂಜೂರು ಮಾಡಬೇಕು ಎಂಬುದಾಗಿ ಮಾಜಿ ಸಚಿವ ಡಿ.ಸುಧಾಕರ್ ರವರ ಪುತ್ರ ಸುಹಾಸ್ ಸುಧಾಕರ್ ಮನವಿ ಮಾಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭರಮಗಿರಿ ಕೆರೆ ಭಾಗದ ಸುತ್ತ ಮುತ್ತಲಿನ ಪ್ರದೇಶಗಳಿಗೆ ನೀರಿನ ಸಮಸ್ಯೆ ಪರಿಹಾರಕ್ಕೆ ₹1.25 ಕೋಟಿ ಅನುದಾನ ನೀಡುವಂತೆ ಒತ್ತಾಯಿಸಿ, ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ಈ ಕಾಮಗಾರಿ ಅನುಷ್ಠಾನಗೊಂಡರೆ ಸುತ್ತಮುತ್ತಲಿನ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುವುದರ ಜೊತೆಗೆ ಜಾನುವಾರುಗಳಿಗೆ, ರೈತರಜಮೀನುಗಳಿಗೆ ಅನುಕೂಲವಾಗಿ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ. ನಮ್ಮ ತಂದೆ ದಿವಂಗತ ಡಿ. ಸುಧಾಕರ್ ಅವರು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಮುಂದುವರಿಸಿ, ಕಾಮಗಾರಿಗೆ ಶೀಘ್ರ ಅನುಮೋದನೆ ನೀಡುವಂತೆ ಕೋರಿದ ಅವರು, ಜನಹಿತದ ಅಭಿವೃದ್ಧಿ ಕಾರ್ಯಗಳಿಗಾಗಿ ನಮ್ಮ ಪ್ರಯತ್ನ ನಿರಂತರವಾಗಿರುತ್ತದೆ ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ನಾಗೇಂದ್ರ ನಾಯ್ಕ್, ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಕೃಷ್ಣಮೂರ್ತಿ, ಬರಮಗಿರಿ ಗ್ರಾಮಸ್ಥರಾದ ಮಹೇಶ್, ಲೋಕಣ್ಣ, ಕಾಂತರಾಜು, ವೀರಭದ್ರಪ್ಪ, ಶಿವಣ್ಣ, ಯೋಗೇಶ್, ಬಳಘಟ್ಟಗೋವಿಂದ, ರಘು, ತಳವಾರಟ್ಟಿಶಿವು, ಶ್ರೀನಿವಾಸ, ತಿಮ್ಮರಾಜು, ಹನುಮಂತಪ್ಪ, ಶಶಿಕುಮಾರ್ ಹಾಗೂ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.
