
ಹಿರಿಯೂರು :
ತಾಲೂಕಿನ ಐಮಂಗಳ ಗ್ರಾಮದಲ್ಲಿರುವ ಬಸವಹರಳಯ್ಯ ಗುರುಪೀಠದ ಹರಳಯ್ಯ ಸ್ವಾಮೀಜಿಗಳ ಮೇಲೆ ಮಾರಣಾಂತಿಕ ಹಲ್ಲೆಯನ್ನು ನಡೆಸಿರುವುದು ನಿಜಕ್ಕೂ ಖಂಡನೀಯ, ಈ ಕೊಲೆಯತ್ನದ ಪ್ರಕರಣದ ತನಿಖೆಯನ್ನು ಎಸ್.ಐಟಿ.ಗೆ ವಹಿಸಬೇಕು ಎಂಬುದಾಗಿ ಧರಣಿನಿರತರು ಆಗ್ರಹಿಸಿದ್ದಾರೆ.
ನಗರದ ಗಾಂಧಿವೃತದಲ್ಲಿ ದಲಿತ ಸ್ವಾಭಿಮಾನಿ ಹೋರಾಟಗಾರರ ನೇತೃತ್ವದಲ್ಲಿ ಸೋಮವಾರದಂದು ಹಮ್ಮಿಕೊಳ್ಳಲಾಗಿದ್ದ ಒಂದುದಿನದ ಸಾಂಕೇತಿಕ ಧರಣಿಯನ್ನು ನಡೆಸಿ, ಬೇಡಿಕೆಗಳ ಮನವಿಯನ್ನು ತಾಲ್ಲೂಕು ತಹಶೀಲ್ದಾರರಿಗೆ ಸಲ್ಲಿಸಿ, ನಂತರ ಅವರು ಮಾತನಾಡಿದರು.
ಸ್ವಾಮೀಜಿಯ ಮೇಲೆ ನಡೆದಿರುವ ಹಲ್ಲೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸವಾಲೊಡ್ಡುವಂತಿದೆ, ಇಂತಹ ಹಲ್ಲೆ ಪ್ರಬಲ ಜನಾಂಗದ ಸ್ವಾಮೀಜಿಗಳ ಮೇಲೆ ನಡೆದಿದ್ದರೆ ರಾಜ್ಯವೇ ಹೊತ್ತಿ ಉರಿಯುತ್ತಿತ್ತು, ಪೊಲೀಸ್ ಠಾಣೆಯ ಒಳಗೆ ಪೊಲೀಸ್ ಭದ್ರತೆ ನಡುವೆಯೂ ಸ್ವಾಮೀಜಿ ಮೇಲೆ ಹಲ್ಲೆ ನಡೆಸಿರುವುದು ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಸಾರ್ವಜನಿಕರು ಆತಂಕ ಪಡುವಂತೆ ಮಾಡಿದೆ ಎಂಬುದಾಗಿ ಧರಣಿ ನಿರತರು ದೂರಿದರು.
ಸ್ವಾಮೀಜಿ ಮೇಲೆ ನಡೆದಿರುವ ಹಲ್ಲೆ ಕೇವಲ ಭೂ ವಿವಾದಕ್ಕೆ ಸಂಬಂಧಿಸಿದ ಎಂದರೆ ನಂಬಲಾಗುತ್ತಿಲ್ಲ ಇದರ ಹಿಂದೆ ಪ್ರಭಾವಿ ವ್ಯಕ್ತಿಗಳು, ಸಂಘಟಿತ ಷಡ್ಯಂತ್ರ ಇರುವಂತೆ ಕಾಣುತ್ತಿದೆ ಹೀಗಾಗಿ ಎಸ್.ಐ.ಟಿ ತನಿಖೆಯ ಮೂಲಕವೇ ಸತ್ಯವನ್ನು ಹೊರಗೆ ತರಬೇಕು ಎಂಬುದಾಗಿ ಧರಣಿ ನಿರತರು ಒತ್ತಾಯಿಸಿದರು
ಈ ಸಂದರ್ಭದಲ್ಲಿ ದಲಿತ ಮುಖಂಡರುಗಳಾದ ಬೋರನಕಂಟೆ ಜೀವೇಶ್, ಹೆಗ್ಗೆರೆ ಮಂಜುನಾಥ್, ಸಿ.ಎಲ್.ಅವಿನಾಶ್, ರಾಯಣ್ಣ, ಕದುರಪ್ಪ, ಮಹೇಶ್ ಪಟ್ರೆಹಳ್ಳಿ, ಜಿ.ಎಲ್.ಮೂರ್ತಿ, ದೇವಣ್ಣಮ್ಯಾಕ್ಲೂರಹಳ್ಳಿ, ಮುತ್ತುರಾಜ್, ವಿ.ಕೆ.ಗುಡ್ಡಮಹಲಿಂಗಪ್ಪ, ಬಗ್ಗನಡುತಿಮ್ಮಯ್ಯ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
