
ಹಿರಿಯೂರು :
ಮಾದಿಗ ಸಮಾಜ ಶೋಷಣೆಗೆ ಒಳಗಾಗಬಾರದೆಂಬ ಉದ್ದೇಶದಿಂದ ಸರ್ಕಾರ ಹಾಗೂ ವ್ಯವಸ್ಥೆ ವಿರುದ್ಧ ಹೋರಾಟ ನಡೆಸುವ ಮೂಲಕ ಇಡೀ ದೇಶದಲ್ಲಿ ಮಾದಿಗರ ದನಿಯಾಗಿ ಅವಿರತವಾಗಿ ದುಡಿದ ಮಂದಕೃಷ್ಣಮಾದಿಗರವರು ತನ್ನ ಸ್ವಂತಕ್ಕೆ ಏನು ಅಪೇಕ್ಷೆ ಪಡದೆ ಜನಾಂಗದ ಒಳಿತಿಗಾಗಿ ಹೋರಾಡುವಲ್ಲಿ ಮೊದಲನೇ ಸ್ಥಾನದಲ್ಲಿ ನಿಲ್ಲಬಲ್ಲವರಾಗಿದ್ದಾರೆ ಎಂಬುದಾಗಿ ಎನ್.ಡಿ.ಎ.ಟಿಕೆಟ್ ಆಕಾಂಕ್ಷಿ ಹಾಗೂ ರಾಜ್ಯ ಗೊಲ್ಲರಸಂಘದ ಅಧ್ಯಕ್ಷ ರಾಜಣ್ಣ ಹೇಳಿದರು.
ನಗರದ ಶ್ರೀಶೈಲ ರಸ್ತೆಯಲ್ಲಿರುವ ದಲಿತ ಸಂರಕ್ಷಣಾ ಸೇನೆ ಕಚೇರಿಯಲ್ಲಿ ಮಂಗಳವಾರದಂದು ಹಿರಿಯೂರು ಭಾರತೀಯ ಜನತಾ ಪಾರ್ಟಿ ಎಸ್.ಸಿ ಮೋರ್ಚಾ ಮಾದಿಗ ಮೀಸಲಾತಿ ಹೋರಾಟಗಾರರು ಹಾಗೂ ಪದ್ಮಶ್ರೀ ಪ್ರಶಸ್ತಿ ವಿಜೇತ ಮಂದಕೃಷ್ಣಮಾದಿಗರವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿ, ನಂತರ ಅವರು ಮಾತನಾಡಿದರು.
ಮಂದಕೃಷ್ಣಮಾದಿಗರವರ ಆಶಯದಂತೆ ಮಾದಿಗ ಸಮಾಜ ರಾಜಕೀಯ ದಾಳವಾಗಿ ಬಳಕೆಯಾಗದೆ, ಸ್ವಾಭಿಮಾನವನ್ನು ಎದೆಯಲ್ಲಿರಿಸಿಕೊಳ್ಳಬೇಕು, ಕ್ಷೇತ್ರದ ಜನತೆ ಆಶೀರ್ವದಿಸಿದರೆ ಶೋಷಿತ ಸಮಾಜಗಳ ಪರವಾಗಿ ನಿಂತು ಅವರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡುತ್ತೇನೆ ಎಂಬುದಾಗಿ ಅವರು ಹೇಳಿದರು.
ಮೋರ್ಚಾ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಕೆಚ್ಚೆದೆಯ ನಾಯಕ ಮಂದಕೃಷ್ಣ ಮಾದಿಗರು, ದಲಿತರ ಬಾಳಿಗೆ ದಾರಿದೀಪ, ಮಾದಿಗ ಸಮಾಜದ ಬಂಧುಗಳು ಆಸೆ ಆಮಿಷಗಳಿಗೆ ಬಲಿಯಾಗದಂತೆ ಸರಿದಾರಿಯಲ್ಲಿ ನಡೆಯಲು ನಮಗೆಲ್ಲ ಪ್ರೇರಣೆ, ಇಂದು ಅವರ ಹುಟ್ಟುಹಬ್ಬ ಆಚರಿಸುತ್ತಿರುವುದು ಅವರಿಗೆ ಸಲ್ಲುವ ಗೌರವ ಮತ್ತು ನಮ್ಮ ಹೆಮ್ಮೆಯ ಪ್ರತೀಕ, ತಾಲೂಕಿನ ಜನ ನಮ್ಮ ಸಮಾಜ ಸರಿತಪ್ಪು ಅರ್ಥಮಾಡಿಕೊಳ್ಳಬೇಕು ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರುಗಳಾದ ಕೆ.ದ್ಯಾಮೇಗೌಡ್ರು, ಕೇಶವಮೂರ್ತಿ, ಸಮಾಜದ ಮುಖಂಡರುಗಳಾದ ತಿಪ್ಪೇಸ್ವಾಮಿ, ರಾಜಣ್ಣ, ಸಂತೋಷ್ ರಂಗೇನಹಳ್ಳಿ, ರಾಯಣ್ಣ, ಮಹೇಶ್, ದೇವರಾಜ್, ಚಿದಾನಂದ, ಯಶುಸೂರಗೊಂಡನಹಳ್ಳಿ, ವೇದಮೂರ್ತಿ, ರಾಘು, ಪಾರ್ಥ ಜಿ.ಎನ್.ರುದ್ರೇಶ್ ಇತರರು ಭಾಗವಹಿಸಿದ್ದರು.
