
ಹಿರಿಯೂರು :
ವಾಣಿವಿಲಾಸ ಸಾಗರದ ನೀರನ್ನು ಅಚ್ಚುಕಟ್ಟು ಪ್ರದೇಶಕ್ಕೆ ಹರಿಸಿ ಒಂದು ತಿಂಗಳಾಯಿತು. ಬಿಸಿಲಿನ ತಾಪ ಜಾಸ್ತಿಯಾಗಿದ್ದು ಅಡಿಕೆ,ತೆಂಗು, ಬಾಳೆ, ದಾಳಿಂಬೆ ಮುಂತಾದ ಬೆಳೆಗಳು ಒಣಗುತ್ತಿವೆ. ಆದ್ದರಿಂದ ವಾಣಿವಿಲಾಸ ಸಾಗರದ ನೀರನ್ನು ಅತಿ ತುರ್ತಾಗಿ ಅಚ್ಚುಕಟ್ಟು ಪ್ರದೇಶಕ್ಕೆ ಹರಿಸಬೇಕು ಎಂಬುದಾಗಿ ತಾಲೂಕು ರೈತ ಸಂಘದ ಗೌರವಾಧ್ಯಕ್ಷರಾದ ಆಲೂರು ಸಿದ್ದರಾಮಣ್ಣ ಹೇಳಿದರು.
ನಗರದ ನೀರಾವರಿ ಇಲಾಖೆ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ರವರ ಕಚೇರಿ ಆವರಣದಲ್ಲಿ ತುರ್ತು ನಾಲೆಗಳಲ್ಲಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ನೀರಾವರಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಕೊಳವೆಬಾವಿಗಳ ನೀರಿನಮಟ್ಟ ಕಡಿಮೆಯಾಗುತ್ತಿದ್ದು, ವೇದಾವತಿಯ ನದಿ ಹರಿವು ಸಹ ಕಡಿಮೆಯಾಗಿದೆ, ವಿವಿ ಸಾಗರದ ನೀರನ್ನು ಅಚ್ಚುಕಟ್ಟು ಪ್ರದೇಶಕ್ಕೆ ಅತಿ ತುರ್ತಾಗಿ ಹರಿಸಿದರೆ ಅಂತರ್ಜಲ ವೃದ್ಧಿಯಾಗುತ್ತದೆ ಮತ್ತು ವೇದಾವತಿ ನದಿಯ ಅರಿವು ಹೆಚ್ಚಾಗುತ್ತದೆ. ಆದ್ದರಿಂದ ವಿವಿ ಸಾಗರದ ನೀರನ್ನು ಅಚ್ಚುಕಟ್ಟು ಪ್ರದೇಶಕ್ಕೆ ಹರಿಸಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯೂರು ತಾಲೂಕು ರೈತ ಸಂಘದ ಗೌರವಾಧ್ಯಕ್ಷರಾದ ಆಲೂರುಸಿದ್ದರಾಮಣ್ಣ, ನಂದಿಹಳ್ಳಿರಂಗಸ್ವಾಮಿ, ಆರ್.ಕೆ.ಗೌಡ, ರಾಮ್ ಕುಮಾರ್, ಅನ್ಸರ್, ಆಲೂರುನಾಗೇಶ್, ಅಂಜನಪ್ಪ ಸೇರಿದಂತೆ ಅನೇಕ ರೈತಮುಖಂಡರು ಹಾಜರಿದ್ದರು.
