
ಹಿರಿಯೂರು :
ಮುಂಬರುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ವಿಶ್ವೇಶ್ವರಯ್ಯ ಜಲ ನಿಗಮದ ನಿವೃತ್ತ ವ್ಯವಸ್ಥಾಪಕರಾದ ಸಣ್ಣಚಿತ್ತಯ್ಯನವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ, ಹಿರಿಯೂರಿನ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ಹಾಗೂ ಕಾಡುಗೊಲ್ಲ ಸಮಾಜದ ಮುಖಂಡರು ಒಮ್ಮತದಿಂದ ವಿಧಾನಪರಿಷತ್ ಸದಸ್ಯರಾದ ಪಿ.ಸಿ.ಮೋಹನ್ ಅವರಿಗೆ ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, “ಸಣ್ಣಚಿತ್ತಯ್ಯನವರು ಅಧಿಕಾರಿಯಾಗಿದ್ದ ಅವಧಿಯಲ್ಲಿ ಹಿರಿಯೂರು ಭಾಗದ ನೀರಾವರಿ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸುವ ಮೂಲಕ ಜನಸಾಮಾನ್ಯರ ಹಾಗೂ ರೈತರ ಮನ ಗೆದ್ದಿದ್ದಾರೆ. ಅವರ ಜನಪರ ಕೆಲಸಗಳು ಈ ಭಾಗದಲ್ಲಿ ಅತ್ಯಂತ ಜನಪ್ರಿಯತೆ ತಂದುಕೊಟ್ಟಿವೆ” ಎಂಬುದಾಗಿ ಹೇಳಿದರು.
ಅಲ್ಲದೆ, “ರಾಜ್ಯದ ಸುಮಾರು 15 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವಿನ ನಿರ್ಣಾಯಕ ಶಕ್ತಿ ಹೊಂದಿರುವ ಕಾಡುಗೊಲ್ಲ ಸಮುದಾಯದವರು ಹಿರಿಯೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಮಾಜದ ಒಗ್ಗಟ್ಟು ಮತ್ತು ಸಣ್ಣಚಿತ್ತಯ್ಯನವರ ಜನಪ್ರಿಯತೆಯನ್ನು ಪರಿಗಣಿಸಿ ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಟಿಕೆಟ್ ನೀಡಬೇಕು. ಇದರಿಂದ ಪಕ್ಷದ ಗೆಲುವು ಸುಲಭವಾಗಲಿದೆ” ಎಂದು ಕಾರ್ಯಕರ್ತರು ಬಲವಾಗಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಡುಗೊಲ್ಲ ಸಮಾಜದ ತಾಲ್ಲೂಕು ಅಧ್ಯಕ್ಷರಾದ ಪಿ. ಆರ್. ದಾಸ್. ಯತೀಶ್ ಅಣ್ಣ. ವಕೀಲರಾದ ನಾಗರಾಜ್ ಉಗ್ರಪ್ಪ.ಧರ್ಮಪುರ ಕೃಷ್ಣಮೂರ್ತಿ ಶ್ರೀಮತಿ ಶಿವರಂಜನಿ ಯಾದವ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಣ್ಣ ಚಿತ್ತಯ್ಯ ನವರ ಅಭಿಮಾನಿಗಳು ಕಾಡುಗೊಲ್ಲ ಸಮಾಜದ ಮುಖಂಡರು ಉಪಸ್ಥಿತರಿದ್ದರು.
