
ಹಿರಿಯೂರು :
ತಾಲ್ಲೂಕಿನ ಪುರಾತನ ಪ್ರಸಿದ್ಧವಾದ ಹಾಗೂ ವಾಣಿವಿಲಾಸ ಸಾಗರದ ಹಿನ್ನೀರಿನಲ್ಲಿರುವ ಹಾರನಕಣಿವೆ ರಂಗನಾಥಸ್ವಾಮಿಗೆ ಪೂಜೆ ಸಲ್ಲಿಸುವುದರ ಮೂಲಕ ಎಸ್.ಪಿ.ಎಸ್.ಕ್ರಿಯೇಷನ್ಸ್ ಲಾಂಛನದಡಿ ನಿರ್ಮಾಣಗೊಳ್ಳುತ್ತಿರುವ “ಬ್ಲಾಕ್-ಕ್ಯಾಟ್” ಕನ್ನಡ ಚಲನಚಿತ್ರದ ಚಿತ್ರೀಕರಣವನ್ನ ಶಾಸ್ತ್ರೋಕ್ತವಾಗಿ ಆರಂಭಿಸಲಾಯಿತು ಎಂಬುದಾಗಿ ಚಿತ್ರದ ನಿರ್ಮಾಪಕ ಹಾಗು ನಿರ್ದೇಶಕ ಡಿ.ಸಿ.ಪಾಣಿ ಹೇಳಿದರು.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಚಿತ್ರದ ನಿರ್ಮಾಪಕ ಹಾಗು ನಿರ್ದೇಶಕ ಡಿ.ಸಿ.ಪಾಣಿಯವರು “ಇದು ನಮ್ಮ ಸಂಸ್ಥೆಯ ಮೂರನೇ ಚಲನಚಿತ್ರವಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಒಬ್ಬ ಸ್ನಾತಕೋತ್ತರ ಪದವೀಧರನಿಂದ ಅಧ್ಯಯನ ಆಗಿರುವ ಪತ್ತೇದಾರಿ ಕಥಾವಸ್ತು ಇದು ಹೊಂದಿದೆ” ಎಂಬುದಾಗಿ ಅವರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಅಲ್ಲದೇ ಮಹಾರಾಷ್ಟ್ರ ಹಾಗು ಆಂಧ್ರಪ್ರದೇಶಗಳಲ್ಲಿಯೂ ಈ ಸಿನಿಮಾದ ಚಿತ್ರೀಕರಣ ನಡೆಯಲಿದ್ದು, ಅಲ್ಲದೆ ಈ ಸಿನಿಮಾದ ಕಥೆ ಅತ್ಯಂತ ಕುತೂಹಲಕಾರಿಯಾಗಿದ್ದು, ಸುಮಾರು ಮೂರು ತಿಂಗಳಲ್ಲಿ ಚಿತ್ರೀಕರಣ ಮುಗಿಸುವ ಉದ್ದೇಶ ಹೊಂದಿದ್ದೇವೆ, ಈ ಬಗ್ಗೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ ಎಂದು ಸಹ ಅವರು ತಿಳಿಸಿದ್ದಾರೆ.
ಈ ಚಲನಚಿತ್ರದ ನಾಯಕ ನಟನಾಗಿ ಎಂ.ಆರ್ಮುಗಮ್ ಹಾಗೂ ನಾಯಕ ನಟಿಯಾಗಿ ಕುಮಾರಿ ಸುಪ್ರಿಯ ಅಭಿನಯಿಸುತ್ತಿರುವ, ಈ ಚಿತ್ರದಲ್ಲಿ ಎನ್.ಎಸ್.ಜೋಧಾ, ಖಾಸಗಿಪತ್ತೇದಾರನಾಗಿ ವಿಶೇಷವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕುಮಾರಿ ವಿದ್ಯ, ಎಂ.ಟಿ.ಬಿ.ನಾಯ್ಕ್, ಪ್ರಭಾಕರ ರೆಡ್ಡಿ, ರಾಜಪ್ಪ, ಡಾನ್ಸ್ ಮಾಸ್ಟರ್ ಮಹೇಶ್ ಮುಂತಾದವರು ಪ್ರಮುಖ ಪಾತ್ರಧಾರಿಗಳಾಗಿರುತ್ತಾರೆ. ಚಿತ್ರದ ಛಾಯಾಗ್ರಾಹಕರಾಗಿ ಎ.ರಾಮಕೃಷ್ಣಪ್ಪ ಕಾರ್ಯ ನಿರ್ವಹಿಸಲಿದ್ದಾರೆ.
