
ಹಿರಿಯೂರು :
ತಾಲೂಕಿನ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದಿರುವ ತೆಂಗು, ಅಡಿಕೆ, ಬಾಳೆ, ಪಪ್ಪಾಯಿ, ದಾಳಿಂಬೆ ಇತ್ಯಾದಿ ತೋಟಗಾರಿಕೆ ಬೆಳೆಗಳು ಮತ್ತು ಅಲ್ಪಾವಧಿ ಬೆಳೆಗಳು ಒಣಗುತ್ತಿರುವುದರಿಂದ ಸಕಾಲಕ್ಕೆ ಮಳೆಯಾಗದೆ ಅಂತರ್ಜಲ ಕಡಿಮೆಯಾಗಿ ಬೋರ್ವೆಲ್ ಗಳಲ್ಲಿ ನೀರು ಬತ್ತುತ್ತಿರುವುದರಿಂದ ತೋಟಗಾರಿಕೆ ಮತ್ತು ಇತರೆ ಬೆಳೆಗಳಿಗೆ ವಿವಿಸಾಗರ ಜಲಾಶಯದಿಂದ ಎಡ ಮತ್ತು ಬಲಕಾಲುವೆಗಳ ಮುಖಾಂತರ ನೀರು ಹರಿಸಿ ರೈತರ ನೆರವಿಗೆ ಧಾವಿಸಬೇಕು ಎಂಬುದಾಗಿ ರಾಜ್ಯ ರೈತಸಂಘದ ವಿಭಾಗೀಯ ಉಪಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ ಹೇಳಿದರು.
ನಗರದ ವಿಶ್ವೇಶ್ವರಯ್ಯ ಜಲನಿಗಮದ ಕಚೇರಿ ಆವರಣದಲ್ಲಿ ವಾಣಿವಿಲಾಸ ಸಾಗರ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ಎಡ ಮತ್ತು ಬಲೆ ಕಾಲುವೆಗಳಿಂದ ನೀರು ಹರಿಸುವಂತೆ ಒತ್ತಾಯಿಸಿ, ಜಿಲ್ಲಾ ಸಹಾಯಕ ಕಾರ್ಯಪಾಲಕ ಅಭಿಯಂತರರ ಮುಖಾಂತರ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ವಿವಿಸಾಗರ ಜಲಾಶಯದಿಂದ ಸುಮಾರು 121.90 ಅಡಿಗಿಂತ ಹೆಚ್ಚು ನೀರು ಇರುವುದರಿಂದ ಜಲಾಶಯದ ನೀರು ಹರಿಸುವುದರಿಂದ ನೀರಿನ ಅಭಾವ ಉಂಟಾಗುವುದಿಲ್ಲ ಎಂಬ ಭಾವನೆ ತಾಲೂಕಿನ ರೈತರಲ್ಲಿದೆ, ಆದ್ದರಿಂದ ವಿವಿಸಾಗರದ ನೀರನ್ನು ಶೀಘ್ರದಲ್ಲೇ ನೀರು ಹರಿಸುವಂತೆ ರೈತಸಂಘದ ವತಿಯಿಂದ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ರೈತಸಂಘದ ವಿಭಾಗೀಯ ಉಪಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ, ತಾಲೂಕು ಅಧ್ಯಕ್ಷರಾದ ಬಿ.ಒ.ಶಿವಕುಮಾರ್ ಬ್ಯಾಡರಹಳ್ಳಿ, ತಾಲೂಕು ಯುವಘಟಕದ ಅಧ್ಯಕ್ಷರಾದ ಆರ್.ಚೇತನ್ ಯಳನಾಡು, ತಾಲೂಕು ಕಾರ್ಯಾಧ್ಯಕ್ಷರಾದ ಹೆಚ್.ದಸ್ತಗೀರ್ ಸಾಬ್ ಹಾಗೂ ಜಿಲ್ಲಾಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ, ಉಪಾಧ್ಯಕ್ಷರಾದ ಮೇಟಿಕುರ್ಕೆತಿಪ್ಪೇಸ್ವಾಮಿ, ಜಿಲ್ಲಾ ಉಪಾಧ್ಯಕ್ಷರಾದ ಎಂ.ಲಕ್ಷ್ಮಿಕಾಂತ್, ಹಸಿರು ಸೇನೆ ಅಧ್ಯಕ್ಷರಾದ ವೆಂಕಟೇಶ್, ಸೇರಿದಂತೆ ನಿತ್ಯಶ್ರೀ, ಅಜಯ್, ನಿಜಲಿಂಗಮ್ಮ ಸೇರಿದಂತೆ ಅನೇಕ ರೈತಮುಖಂಡರು ಉಪಸ್ಥಿತರಿದ್ದರು.
