
ಮಧುಗಿರಿ :
ನಗರದ ರಾಘವೇಂದ್ರ ಆಸ್ಪತ್ರೆಯ ಹೆಸರಾಂತ ತಜ್ಞವೈದ್ಯರಾದ ಡಾ.ಜಿ.ಕೆ.ಜೈರಾಂರವರು ನೂತನವಾಗಿ ಆಯುರ್ವೇದ ಆಸ್ಪತ್ರೆಯನ್ನು ಈ ಗ್ರಾಮೀಣ ಪ್ರದೇಶದಲ್ಲಿ ಆರಂಭಿಸುವ ಮೂಲಕ ನಮ್ಮ ಭಾರತದ ಸನಾತನ ಆಯುರ್ವೇದ ವೈದ್ಯಕೀಯ ಪದ್ಧತಿಯನ್ನು ಪುನರುಜ್ಜೀವನಗೊಳಿಸುವ ಮಹತ್ವದ ಕಾರ್ಯಕ್ರಮ ಕೈಗೊಂಡಿದ್ದಾರೆ ಎಂಬುದಾಗಿ ಶಾಸಕ ಕೆ.ಎನ್.ರಾಜಣ್ಣ ಹೇಳಿದರು.
ನಗರದ ತುಮಕೂರು ಗೇಟ್ ಹತ್ತಿರ ನೂತನವಾಗಿ ಆರಂಭಿಸಲಾದ ಶ್ರೀರಾಘವೇಂದ್ರ ಆಯುರ್ವೇದ ಆಸ್ಪತ್ರೆಯನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ, ನಂತರ ಅವರು ಮಾತನಾಡಿದರು.

ತಾಲೂಕಿನಲ್ಲಿ ಆಯುರ್ವೇದ ಕಾಲೇಜು ಸ್ಥಾಪಿಸುವ ಉದ್ದೇಶದಿಂದ ಪೂರ್ವಭಾವಿಯಾಗಿ ಆಯುರ್ವೇದ ಆಸ್ಪತ್ರೆಯನ್ನು ಆರಂಭಿಸಲಾಗಿದ್ದು, ಈ ಆಸ್ಪತ್ರೆಯಲ್ಲಿ ಕಡಿಮೆ ವೆಚ್ಚದಲ್ಲಿ ಜನರ ಮನೆ ಬಾಗಿಲಿಗೆ ಗುಣಮಟ್ಟದ ವೈದ್ಯಕೀಯ ಸೇವೆ ದೊರೆಯಲಿದ್ದು, ಸಾರ್ವಜನಿಕರು ಇದರ ಸದುಉಪಯೋಗವನ್ನು ಪಡೆದುಕೊಳ್ಳಬೇಕು ಎಂಬುದಾಗಿ ಹೇಳಿದರು.
ಶ್ರೀರಾಘವೇಂದ್ರ ಆಯುರ್ವೇದ ಆಸ್ಪತ್ರೆ ತುಮಕೂಕು ಜಿಲ್ಲೆಗೆ 2ನೇ ಆಯುರ್ವೇದ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಆಯುರ್ವೇದ ಆಸ್ಪತ್ರೆಯಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಮಧುಗಿರಿ ಕ್ಷೇತ್ರದ ಜನರಿಗೆ ಇಂತಹ ಆಸ್ಪತ್ರೆ ಅಗತ್ಯವಿತ್ತು, ಆ ಕೊರತೆಯನ್ನು ಡಾ.ಜಿ.ಕೆ.ಜೈರಾಂ ರವರು ನೀಗಿಸಿದ್ದಾರೆ ಎಂಬುದಾಗಿ ಅವರು ಪ್ರಶಂಶಿಸಿದರು.

ಪಾವಗಡದ ಶ್ರೀರಾಮಕೃಷ್ಣಆಶ್ರಮದ ಶ್ರೀಜಪಾನಂದ ಮಹಾರಾಜ್ ಸ್ವಾಮೀಜಿ ಮಾತನಾಡಿ, ಸುಮಾರು 3500 ವರ್ಷಗಳ ಇತಿಹಾಸ ಹೊಂದಿರುವ ಆಯುರ್ವೇದ ಪರಂಪರೆಯನ್ನು ಮಧುಗಿರಿ ಜನತೆಗೆ ಪರಿಚಯಿಸುತ್ತಿರುವುದು ಶ್ಲಾಘನೀಯ ಕಾರ್ಯ, ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆ ಒದಗಿಸುವುದು ಸವಾಲಿನ ವಿಷಯವಾಗಿರುವ ಸಂದರ್ಭದಲ್ಲಿ ಆಯುರ್ವೇದ ಆಸ್ಪತ್ರೆ ಆರಂಭಿಸುವುದು ಸಂತಸದ ಸಂಗತಿ ಎಂಬುದಾಗಿ ಹೇಳಿದರು
ಧರ್ಮಸ್ಥಳದ ಎಸ್.ಡಿ.ಎಮ್ ಆಯುರ್ವೇದ ಶಿಕ್ಷಣ ಸಂಸ್ಥೆಯ ನಿರ್ದೇಶಕ ಪ್ರಸನ್ನನರಸಿಂಹರಾವ್ ಮಾತನಾಡಿ, ಡಾ.ಜಯರಾಮ್ ಅವರು ಆಯುರ್ವೇದ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ, ಗ್ರಾಮೀಣ ಪ್ರದೇಶದ ಜನರಿಗೆ ಈ ಆಸ್ಪತ್ರೆ ಒಂದು ವರದಾನವಾಗಲಿದ್ದು, ಇದರ ಸದುಪಯೋಗ ಜನತೆ ಪಡೆಯುವಂತಾಗಲಿ ಎಂದರು.
ಈ ಕಾರ್ಯಕ್ರಮದಲ್ಲಿ ಹಾಸನದ ಆಯುರ್ವೇದ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಡಾ.ಶೈಲಜಾ, ಪವಾಡ ವಿರೋಧಿ ಸಮಿತಿ ಹುಲಿಕಲ್ ನಟರಾಜು, ಶ್ರೀರಾಘವೇಂದ್ರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ.ಜಿ.ಕೆ.ಜೈರಾಂ, ಅಧ್ಯಕ್ಷೆ ಶ್ರೀಮತಿ ವಿಮಲಾ ಜೈರಾಂ, ಅವರ ಮಕ್ಕಳಾದ ಡಾ.ರಾಘವೇಂದ್ರಬಾಬು, ಡಾ.ರಂಜಿತಾ, ಡಾ.ಶಾಲಿನಿರಾಘವೇಂದ್ರಬಾಬು, ಪಾವಗಡದ ಹಿರಿಯ ವೈದ್ಯ ಡಾ.ವೆಂಕಟರಾಮಯ್ಯ, ಧಾರ್ಮಿಕ ಮುಖಂಡ ಎಂ.ಜಿ.ಶ್ರೀನಿವಾಸಮೂರ್ತಿ, ಚಿತ್ರದುರ್ಗ ಜಿ.ಪಂ.ಮಾಜಿ ಅಧ್ಯಕ್ಷ ಬಿ.ಎಸ್.ರಘುನಾಥ್, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪ, ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಕೃಷ್ಟಾರೆಡ್ಡಿ, ಬಿಜೆಪಿ ಮುಖಂಡರಾದ ಪಾಂಡುರಂಗರೆಡ್ಡಿ, ಚೇತನ ವಿದ್ಯಾಸಂಸ್ಥೆ ತುಂಗೋಟಿ ರಾಮಣ್ಣ, ಹಿರಿಯ ವಕೀಲರಾದ ರಾಮಕೃಷ್ಣ, ಮಾಜಿಪುರಸಭಾ ಅಧ್ಯಕ್ಷರಾದ ನಂಜುಂಡರಾಜು, ಸಹಕಾರಿಧುರೀಣ ಗಂಗಣ್ಣಿ, ರಾಘವೇಂದ್ರ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಗುರುಪ್ರಸಾದ್ ಭಟ್, ಶ್ರೀಮತಿ ಲಕ್ಷ್ಮೀ ಭಟ್, ಜುಪಿಟರ್ ಪಬ್ಲಿಕ್ ಶಾಲೆಯ ಮುಖ್ಯಶಿಕ್ಷಕ ಶ್ರೀನಾಥ್, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಆರಂಭದಲ್ಲಿ ಸಹಶಿಕ್ಷಕಿ ಶ್ರೀಮತಿ ಸುಜಾತ ಪ್ರಾರ್ಥಿಸಿದರು. ರಾಘವೇಂದ್ರ ಆಯುರ್ವೇದ ಆಸ್ಪತ್ರೆಯ ತಜ್ಞವೈದ್ಯರಾದ ಡಾ.ಉಲ್ಲಾಸ್ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ಕೊನೆಯಲ್ಲಿ ಸಹಶಿಕ್ಷಕಿ ಶ್ರೀಮತಿ ರಾಧಾ ವಂದಿಸಿದರು. ಜುಪಿಟರ್ ಶಾಲೆಯ ಮುಖ್ಯಶಿಕ್ಷಕ ಶ್ರೀನಾಥ್ ಹಾಗೂ ಬಿ.ಎಲ್.ಮಾರುತಿಬಿಜವಾರ ಕಾರ್ಯಕ್ರಮ ನಿರೂಪಣೆ ಮಾಡಿದರು.
