
ಹಿರಿಯೂರು :
ಎಸ್.ಜಾನಕಿರವರು 17ಕ್ಕೂ ಹೆಚ್ಚು ಭಾಷೆಗಳಲ್ಲಿ 40ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಜೀವ ತುಂಬಿದ ಮಹಾನ್ ಚೇತನ, ನಮ್ಮ ಸಂಗೀತ ಕ್ಷೇತ್ರದ ಅಕ್ಷಯ ಪಾತ್ರೆಯಾಗಿದ್ದರು, ಶ್ರುತಿ ಲಯ ಭಾವನೆಗಳ ಸಮ್ಮಿಲನದಂತಿದ್ದ ಅವರ ಗಾಯನ ಶೈಲಿ ಮುಂದಿನ ತಲೆಮಾರುಗಳಿಗೆ ದಾರಿದೀಪವಾಗಿದೆ ಎಂಬುದಾಗಿ ನಾದಮಯ ಸಂಗೀತ ಮತ್ತು ಸಾಂಸ್ಕೃತಿಕ ಕಲಾಸಂಸ್ಥೆಯ ಅಧ್ಯಕ್ಷರಾದ ಹೆಚ್.ಎಸ್.ಮಾರುತೇಶಕೂನಿಕೆರೆ ಹೇಳಿದರು.
ಕರ್ನಾಟಕ ಕಂಪ್ಯೂಟರ್ ಸೆಂಟರ್ ನಲ್ಲಿ ನಾದಮಯ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ ಹಾಗೂ ಕಾರ್ಮಿಕ ಪರಿಷತ್ ವತಿಯಿಂದ ಸಂಗೀತ ಲೋಕದ ಧ್ರುವತಾರೆ ಸುಮಧುರ ಸ್ವರಗಳ ಅದಿದೇವತೆ ಗಾನಕೋಗಿಲೆ ಎಸ್.ಜಾನಕಿರವರ ನಿಧನದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ “ಭಾವಪೂರ್ಣಶ್ರದ್ಧಾಂಜಲಿ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಹ ಹಲವಾರು ಜೂನಿಯರ್ ಕಲಾವಿದರು ಕೂಡ ಅವರ ಹಾಗೆ ಹಾಡು ಹಾಡುತ್ತಾ ಅನುಕರಣೆ ಮಾಡುತ್ತಾ ಜೂನಿಯರ್ ಜಾನಕಿ ಅಮ್ಮನವರು ಎಂದು ಕೆಲವು ಮಹಿಳಾ ಕಲಾವಿದರು ಹೆಸರು ಮಾಡಿರುವುದು ಉಂಟು, ಎಸ್.ಜಾನಕಿಯವರ ಹಾಡುಗಳು ಸರ್ವಕಾಲೀಕವಾಗಿದೆ ಎಂದು ಹೇಳಿದರು.
ತಾಲೂಕು ಅಧ್ಯಕ್ಷರಾದ ಪರಮೇಶ್ ರವರು ಮಾತನಾಡಿ, ಎಸ್.ಜಾನಕಿ ಅಮ್ಮನವರ ಅಗಲಿಕೆಯಿಂದ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ, ಜಾನಕಿಯಮ್ಮರವರನ್ನು ಕನ್ನಡನಾಡು ಪ್ರೀತಿಯಿಂದ ಬೆಳೆಸಿದೆ ಅದಕ್ಕಾಗಿ ಅವರ ಕೊನೆಯ ದಿನಗಳು ಮೈಸೂರಿನಲ್ಲೇ ಉಳಿಯುವಂತೆ ಮಾಡಿತು ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಂಪ್ಯೂಟರ್ ಸೆಂಟರ್ ನ ನಾಗರಾಜ್, ವೀರಭದ್ರಪ್ಪ, ಧರ್ಮಪುರ ಕರಿಯಪ್ಪ, ಇದ್ದಲನಾಗೇನಹಳ್ಳಿ ಆದಿತ್ಯ ವಿವಿಪುರ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
