
ಹಿರಿಯೂರು :
ವಿದ್ಯಾರ್ಥಿಗಳು ಇತಿಹಾಸ ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದುವುದರಿಂದ ನಮ್ಮ ಹಿರಿಯರು ನಡೆದು ಬಂದ ದಾರಿಯನ್ನು, ಅವರ ಸಾಧನೆಗಳನ್ನು ತಿಳಿಯಬಹುದಾಗಿದ್ದು, ವಿದ್ಯಾರ್ಥಿಗಳು ಭಾರತ ಸಂವಿಧಾನ ಕುರಿತ ಪುಸ್ತಕಗಳನ್ನು ಓದಿಕೊಂಡರೆ ಮುಂದಿನ ಸಾಮಾಜಿಕ ಸಂಶೋಧನೆ ಮಾಡಲು ಸಹಕಾರಿಯಾಗುತ್ತದೆ ಎಂಬುದಾಗಿ ಜವಗೊಂಡನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇತಿಹಾಸ ಸಹಾಯಕ ಪ್ರಾಧ್ಯಾಪಕರಾದ ಪಿ.ವಿಜಯಪ್ರಕಾಶ್ ಹೇಳಿದರು.
ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯಕ್ಕೆ ಭಾರತದ ಸಂವಿಧಾನ ರಚನಾ ಸಭೆಯ ಚರ್ಚೆಗಳ ನಡವಳಿಗಳು ಒಟ್ಟು 10 ಸಂಪುಟಗಳು ಹಾಗೂ ದಕ್ಷಿಣ ಭಾರತದ ಬುಡಕಟ್ಟುಗಳು ಥರ್ ಸ್ಟನ್ 7 ಸಂಪುಟಗಳ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿ, ನಂತರ ಅವರು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಡಿ.ಧರಣೇಂದ್ರಯ್ಯ ಮಾತನಾಡಿ, ಪುಸ್ತಕಗಳು ನಮ್ಮ ನಿಜವಾದ ಸ್ನೇಹಿತರು, ವಿದ್ಯಾರ್ಥಿಗಳು ಕಾಲೇಜಿನ ಬಿಡುವಿನ ಸಮಯದಲ್ಲಿ ಇಂತಹ ಅದ್ಭುತ ಪುಸ್ತಕಗಳನ್ನು ಓದುವುದರ ಮೂಲಕ ನಿಮ್ಮ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಂಡು, ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ ಎಂದರಲ್ಲದೆ, ಪುಸ್ತಕಗಳನ್ನು ಕೊಡುಗೆ ನೀಡಿದ ಪಿ.ವಿಜಯಪ್ರಕಾಶ್ ರವರನ್ನು ಕಾಲೇಜಿನ ಪರವಾಗಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ವಾಣಿಕಾಲೇಜಿನ ಅಧೀಕ್ಷಕರಾದ ಪಿ.ಎನ್.ನರಸಿಂಹಮೂರ್ತಿ, ಉಪನ್ಯಾಸಕರಾದ ನಾಗರಾಜು, ವಿ.ಪುಟ್ಟರಾಜು ಹಾಗೂ ಅಂತಿಮ ಬಿಎ ವಿದ್ಯಾರ್ಥಿಗಳು ಹಾಜರಿದ್ದರು.
