
ಹಿರಿಯೂರು :
ಮಾದಿಗ ಸಮುದಾಯಕ್ಕೆ ಒಳಮೀಸಲಾತಿಯಲ್ಲಿ ಸಿಗಬೇಕಾದ ಪಾಲು ಸಿಗಬೇಕು, ಅದು ಅವರ ನ್ಯಾಯಬದ್ಧವಾದ ಹಕ್ಕು, ಇಲ್ಲವಾದಲ್ಲಿ ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದಾಗಿ ಕೋಡಿಹಳ್ಳಿ ಆದಿಜಾಂಬವ ಮಹಾಸಂಸ್ಥಾನಮಠದ ಶ್ರೀ ಷಡಕ್ಷರಿಮುನಿ ದೇಶೀಕೇಂದ್ರ ಸ್ವಾಮೀಜಿಯವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಒಳಮೀಸಲಾತಿಗೆ ಆಗ್ರಹಿಸಿ, ಹರಿಹರದಿಂದ ಬೆಂಗಳೂರಿನವರೆಗೆ ನಡೆಯುತ್ತಿರುವ ಪಾದಯಾತ್ರೆ ತಾಲ್ಲೂಕಿನ ಗಡಿಭಾಗದ ಜವನಗೊಂಡನಹಳ್ಳಿ ತಲುಪಿದ ಸಂದರ್ಭದಲ್ಲಿ ಕುರಿಕಾಯುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಮಾತನಾಡಿದರು.

ಒಳಮೀಸಲಾತಿ ಅನ್ವಯಿಸಿ, ಹುದ್ದೆಗಳನ್ನು ಭರ್ತಿ ಮಾಡಬೇಕು, ಸುಮಾರು 35 ವರ್ಷಗಳಿಂದ ಮಾದಿಗ ಸಮುದಾಯ ಒಳಮೀಸಲಾತಿ ಕೊಡಿ ಎಂದು ಕೇಳುತ್ತಲೇ ಇದೆ, ಸರ್ಕಾರ ಕೊಡೋಣ ಎಂದು ಹೇಳುತ್ತಲೇ ಇದೆ, ಆಸೆ ತೋರಿಸಿ, ಗುಂಡಿಗೆ ತಳ್ಳುವ ಮನಃಸ್ಥಿತಿ ಸರಿಯಲ್ಲ ಎಂಬುದಾಗಿ ಸ್ವಾಮೀಜಿ ಹೇಳಿದರು.
ಒಳಮೀಸಲಾತಿ ಅನ್ವಯಿಸಿ, 56432 ಹುದ್ದೆಗಳನ್ನು ಭರ್ತಿ ಮಾಡಬೇಕು, ಇಲ್ಲದಿದ್ದರೆ ಮಾದಿಗರ ಮಹಾಕ್ರಾಂತಿಗೆ ಸರ್ಕಾರವೇ ಎಡೆ ಮಾಡಿ, ಕೊಟ್ಟಂತಾಗುತ್ತದೆ, ಸಮಾಜದ ಒಳಿತಿಗಾಗಿ ಮಾರ್ಚ್ 27ರಂದು ನಾವು ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತೇವೆ, ರಾಜ್ಯಾದ್ಯಂತ ಇರುವ ಮಾದಿಗ ಸಮುದಾಯದ ಎಲ್ಲರೂ ಬಂದು ಭಾಗವಹಿಸಬೇಕು ಎಂಬುದಾಗಿ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾದಿಗ ಸಮುದಾಯದ ಮುಖಂಡರುಗಳಾದ ಕೆ.ಪಿ.ಶ್ರೀನಿವಾಸ್, ಮಸ್ಕಲ್ ಮಟ್ಟಿ ಓಂಕಾರ್, ಕೆ.ಮೂರ್ತಿ, ಮಯೂರ, ತಿರುಮಲೇಶ್, ನಾಗರಾಜ್, ಬಾಗಲಕೋಟೆ ದುರ್ಗಪ್ಪ, ಬಳ್ಳಾರಿ ಲಕ್ಷ್ಮಣ್ ಭಂಡಾರಿ, ಗದಗ ಬಸವರಾಜಹೊಸಮನಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
