
ಹಿರಿಯೂರು:
ಒಳಮೀಸಲಾತಿ ಅನ್ವಯಿಸಿ ಹುದ್ಧೆಗಳ ಭರ್ತಿಗೆ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ನಡೆಸಲು ನಿರ್ಧಾರ ಕೈಗೊಳ್ಳಲಾಗುವುದು. ಮುಂದಿನ 30ದಿನಗಳೊಳಗೆ ನೇರ ನೇಮಕಾತಿ ಪ್ರಕ್ರಿಯೆಯಡಿ 56432 ಹುದ್ಧೆಗಳನ್ನು ಭರ್ತಿ ಮಾಡುವ ಸರ್ಕಾರದ ನಿರ್ಧಾರದಿಂದ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಲಿದೆ ಎಂಬುದಾಗಿ ಹಿರಿಯೂರಿನ ಕೋಡಿಹಳ್ಳಿ ಆದಿಜಾಂಬವ ಮಠದ ಶ್ರೀಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಅವರು ಹೇಳಿದರು.
ಪರಿಶಿಷ್ಠರ ಮೀಸಲಾತಿ ಕಡಿಮೆ ಮಾಡಿ, ಒಳಮೀಸಲಾತಿಯೂ ಇಲ್ಲದೆ, ಉದ್ದೆಗಳನ್ನು ಭರ್ತಿ ಮಾಡಿದರೆ ಮಾದಿಗ ಸಮುದಾಯಕ್ಕೆ ವಂಚನೆ ಮಾಡಿದಂತಾಗುತ್ತದೆ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಒಟ್ಟು 24.1% ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿಯನ್ನು ಕಡ್ಡಾಯವಾಗಿ ನೀಡಬೇಕು. ಈಗಿನ ಸರ್ಕಾರ ಈ ನಿಯಮವನ್ನು ಪಾಲಿಸಿಲ್ಲ ಎಂಬುದಾಗಿ ಅವರು ಹೇಳಿದರು.
ಶೇಕಡ 50ರಲ್ಲಿ ಉಳಿದ 25.9% ನ್ನು ಪರಿಶಿಷ್ಟರಲ್ಲದವರು ಬಳಸಿಕೊಳ್ಳಬೇಕು.ಆದರೆ ಪರಿಶಿಷ್ಟರ ಮೀಸಲಾತಿ ಪಾಲನ್ನು ಕಡಿತ ಮಾಡಿರುವುದು ಘೋರ ಅನ್ಯಾಯವಾಗಿದೆ ಎಂಬುದಾಗಿ ಸ್ವಾಮೀಜಿ ಅವರು ಆತಂಕ ವ್ಯಕ್ತಪಡಿಸಿದರು.
ಪರಿಶಿಷ್ಟರಲ್ಲದವರ ಮೀಸಲು ಪಾಲನ್ನು ಕಾಪಾಡಿಕೊಂಡಿರುವ ಸರ್ಕಾರದ ನಡೆ ಸಂವಿಧಾನದ ಆಶಯಗಳನ್ನು ಮೂಲೆಗುಂಪು ಮಾಡಿರುವುದನ್ನು ನಾವು ಖಂಡಿಸುತ್ತೇವೆ ಎಂಬುದಾಗಿ ಅವರು ಹೇಳಿದರು.
ಎಸ್ಸಿಎಸ್ಟಿ ಮತ್ತು ಎಸ್ಟಿ ಕಾಯಿದೆಯ ಅನುದಾನ ನಿಗದಿ ಸಂದರ್ಭದಲ್ಲಿ ಪ.ಜಾತಿ ಹಾಗೂ ಪ.ಪಂಗಂಡಗಳ ಪಾಲು 24.1% ಎಂದು ಸರ್ಕಾರ ಮೀಸಲು ನಿಗದಿಪಡಿಸಿರುವುದು ಎಲ್ಲರಿಗೂ ತಿಳಿದ ಸಂಗತಿ. ಇದರಂತೆ ರಾಜಕೀಯ ಮೀಸಲಾತಿಯು ಚಾಲ್ತಿಯಲ್ಲಿದೆ. ಆದರೆ, ಶಿಕ್ಷಣ ಮತ್ತು ಉದ್ಯೋಗಗಳ ನೇಮಕಾತಿ ವಿಚಾರದಲ್ಲಿ ರಾಜ್ಯದಲ್ಲಿ ಬಹುಸಂಖ್ಯಾತರಾಗಿರುವ ಪ.ಜಾತಿ ಹಾಗೂ ಪ.ಪಂಗಂಡಗಳ ಪಾಲನ್ನು ಕಸಿದುಕೊಂಡಿರುವುದು ಈ ಜನಾಂಗಕ್ಕೆ ಬಹುದ್ರೋಹ ಮಾಡಿದಂತಾಗುತ್ತದೆ ಎಂಬುದಾಗಿ ಸ್ವಾಮೀಜಿ ಅವರು ಹೇಳಿದರು.

