
ಹಿರಿಯೂರು :
ನಗರದ ದಕ್ಷಿಣಕಾಶಿ ಖ್ಯಾತಿಯ ಶ್ರೀತೇರುಮಲ್ಲೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ನೆಲೆಸಿರುವ ಶ್ರೀಕಾಳಿಕಾಂಬದೇವಿಯ ರಥೋತ್ಸವವು ಅನೇಕ ಭಕ್ತರುಗಳ ಸಮಕ್ಷಮದಲ್ಲಿ ಬಸವ ಜಯಂತಿಯ ದಿನವಾದ ಎಪ್ರಿಲ್ 20ರ ಸೋಮವಾರದಂದು ಅತ್ಯಂತ ಸಡಗರ-ಸಂಭ್ರಮ ಭಕ್ತಿಭಾವದಿಂದ ನಡೆಸಲಾಯಿತು.
ಇದರ ಅಂಗವಾಗಿ ದೇವಾಲಯದಲ್ಲಿ ಹೋಮ, ಗಂಗಾಪೂಜೆ, ಗಣಪತಿಪೂಜೆ, ಪುಷ್ಪಾರ್ಚನೆ, ಅಭಿಷೇಕ ಹಾಗೂ ಲೋಕಕಲ್ಯಾಣಕ್ಕಾಗಿ ವಿವಿಧ ಧಾರ್ಮಿಕ ಪೂಜಾಕಾರ್ಯಕ್ರಮಗಳನ್ನು ನಡೆಸಲಾಯಿತು. ರಥೋತ್ಸವವು ಶ್ರೀತೇರುಮಲ್ಲೇಶ್ವರಸ್ವಾಮಿ ದೇವಾಲಯದಿಂದ ಹೊರಟು ಸಿದ್ದನಾಯಕ ವೃತ್ತದವರೆಗೆ ಸಾಗಿ ಬಂತು, ದಾರಿ ಉದ್ದಕ್ಕೂ ಭಕ್ತರ ಮನೆಗಳಲ್ಲಿ ಶ್ರೀಕಾಳಿಕಾಂಬ ದೇವಿಗೆ ಪೂಜೆ ಸಮರ್ಪಿಸಿದರು.
ರಥೋತ್ಸವದ ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನದಾಸೋಹ ಕಾರ್ಯಕ್ರಮ ನಡೆಯಿತು, ಈ ರಥೋತ್ಸವದಲ್ಲಿ ವಿಶ್ವನಾಥಾಚಾರ್, ನಾಗರಾಜಾಚಾರ್, ಮಂಜುನಾಥ್, ರಮೇಶ್, ನವೀನ್, ಬಸವರಾಜ್, ವಿನಯ್, ಜ್ಞಾನಮೂರ್ತಿ, ಜಗದೀಶ್ ಭಂಡಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
