
ಹಿರಿಯೂರು :
ಸಂಗೀತಕ್ಕೆ ದೈವೀಶಕ್ತಿ ಇದ್ದು, ಸಂಗೀತವನ್ನು ಕೇಳುವುದರಿಂದ ಮನಸ್ಸಿಗೆ ಸಂತೋಷ, ನೆಮ್ಮದಿ, ಸಿಗುತ್ತದೆ, ಅಲ್ಲದೆ ಸಂಗೀತ, ಸಾಹಿತ್ಯ, ಜಾನಪದ ಕಲೆಗಳು ಜನರಿಗೆ ಉತ್ತಮ ಮನೋರಂಜನೆ ನೀಡುವುದರ ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತವೆ ಎಂಬುದಾಗಿ ನಿವೃತ್ತ ದೈಹಿಕ ಶಿಕ್ಷಕರು ಹಾಗೂ ಗಾಯಕರಾದ ಶಿವಶಂಕರ ಮಠದ್ ಹೇಳಿದರು.
ನಗರದ ರೋಟರಿ ಸಭಾಭವನದಲ್ಲಿ ವಾಣಿಶ್ರೀ ಮಹಿಳಾ ಸಾಂಸ್ಕೃತಿಕ ಕಲಾಸಂಘ ಹಿರಿಯೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಇನ್ನರ್ ವ್ಹೀಲ್ ಕ್ಲಬ್ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಾನಕೋಗಿಲೆ ದಿ.ಎಸ್.ಜಾನಕಿ ಅವರ ಗಾನನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎಸ್.ಜಾನಕಿ ಅಮ್ಮನವರು ದಕ್ಷಿಣ ಭಾರತದ ಹಲವಾರು ಭಾಷೆಗಳಲ್ಲಿ ಸುಮಧುರವಾಗಿ ಹಾಡುಗಳನ್ನು ಹಾಡುವ ಮೂಲಕ ಜನಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ, ಸತತ ಅಭ್ಯಾಸ ಪರಿಶ್ರಮದ ಮೂಲಕ ಮಾತ್ರ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ, ಎಸ್.ಜಾನಕಿ ಅಮ್ಮನವರ ಹಾಡುಗಳನ್ನು ಈ ಕಾರ್ಯಕ್ರಮದಲ್ಲಿ ಕೇಳುವ ಅವಕಾಶ ಸಿಕ್ಕಿರುವುದು ಸಂತಸದ ವಿಚಾರ ಎಂಬುದಾಗಿ ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚೇರ್ಮನ್ ಹೆಚ್.ಎಸ್.ಸುಂದರ್ ರಾಜ್ ಮಾತನಾಡಿ, ಸಂಗೀತಕ್ಕೆ ಅಗಾಧವಾದ ಶಕ್ತಿಯಿದ್ದು, ಕಲಾವಿದರು ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ, ಸಂಗೀತ ಕಲಿಕೆಯಿಂದ ಏಕಾಗ್ರತೆ ಹೆಚ್ಚಾಗಲಿದ್ದು, ಇಂದಿನ ಮಕ್ಕಳು ಸಂಗೀತವನ್ನು ಕಲಿಯಬೇಕು ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ತುಮಕೂರಿನ ಸ್ವರಾಂಜಲಿ ಕಲಾತಂಡದ ಕಲಾವಿದರು ಗಾನಕೋಗಿಲೆ ದಿ.ಎಸ್.ಜಾನಕಿ ಅವರ ಗೀತೆಗಳನ್ನು ಪ್ರಸ್ತುತಪಡಿಸಿದರು.
ಈ ಕಾರ್ಯಕ್ರಮವನ್ನು ವಾಣಿಶ್ರೀ ಮಹಿಳಾ ಸಾಂಸ್ಕೃತಿಕ ಕಲಾಸಂಘದ ಅಧ್ಯಕ್ಷೆ ನಿರ್ಮಲಮ್ಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಎಚ್.ಡಿ.ವಸಂತ್ ಕುಮಾರ್, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ವೀಣಾಸುರೇಶ್, ಕಾರ್ಯದರ್ಶಿ ನಿರ್ಮಲಾ ಮಹಂತೇಶ್, ಸಂಗೀತ ವಿದ್ವಾನ್ ತಿಪ್ಪೇಸ್ವಾಮಿ, ಎಚ್.ಎಸ್.ರವಿಶಂಕರ್, ಗಾಯಕಿ ತ್ರಿವೇಣಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
