
ಹಿರಿಯೂರು :
ತಾಲ್ಲೂಕಿನ ರೈತರು ತೋಟದ ಮನೆಗಳಲ್ಲಿ, ತಮ್ಮ ಜಮೀನುಗಳಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದು, ಇಂತಹ ರೈತರ ಮನೆಗಳಿಗೆ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಪೂರೈಕೆ ಮಾಡಬೇಕು ಎಂಬುದಾಗಿ ಸಾಮಾಜಿಕ ಕಾರ್ಯಕರ್ತರಾದ ಎಸ್.ವಿ.ರಂಗನಾಥ್ ಆಗ್ರಹ ಪೂರ್ವಕ ಒತ್ತಾಯ ಮಾಡಿದ್ದಾರೆ.
ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಸದ್ಯಕ್ಕೆ ಹಗಲು 5 ಗಂಟೆ ರಾತ್ರಿ 2 ಗಂಟೆ 3 ಫೇಜ್ ಕರೆಂಟ್ ಕೊಡುತ್ತಿದ್ದಾರೆ. ರಾತ್ರಿ 6ಗಂಟೆಯಿಂದ ಬೆಳಿಗ್ಗೆ 6ಗಂಟೆತನಕ ತೋಟದ ಮನೆ ವಾಸಿಗಳ ಅನುಕೂಲಕ್ಕಾಗಿ 2 ಫೇಜ್ ಕರೆಂಟ್ ಕೊಡಬೇಕೆಂಬ ನಿಯಮ ಇದ್ದರೂ ಕೂಡ ಪದೇ ಪದೇ ಸರ್ಕ್ಯೂಟ್ ಬದಲಾಯಿಸಿ ರೈತರಿಗೆ ರಾತ್ರಿ ಕರೆಂಟ್ ಇಲ್ಲದಂತೆ ಮಾಡುತ್ತಾರೆ.
ಈ ಬಗ್ಗೆ ಮೇಲಾಧಿಕಾರಿಗಳು ಎಲ್ಲಾ ಶಾಖಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶವನ್ನು ಮಾಡಿ, ರಾತ್ರಿ ಸಮಯದಲ್ಲಿ ಜಮೀನುಗಳಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ರೈತರ ಸುರಕ್ಷತೆಗಾಗಿ ಅಂತಹ ಮನೆಗಳಿಗೆ ಗೃಹ ಬಳಕೆ ಕರೆಂಟ್ ಪೂರೈಕೆ ಮಾಡಬೇಕು ಎಂಬುದಾಗಿ ಎಸ್.ವಿ.ರಂಗನಾಥ್ ರವರು ಮನವಿ ಮಾಡಿದ್ದಾರೆ.
ಇತ್ತೀಚೆಗೆ ಬಹುತೇಕ ರೈತರು ತಮ್ಮ ಜಮೀನುಗಳಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದು, ಇಂತಹ ರೈತರ ಅನುಕೂಲಕ್ಕಾಗಿ ನಿರಂತರ ಜ್ಯೋತಿ ಉಚಿತ ವಿದ್ಯುತ್ ಪರಿವರ್ತಕ ಪೂರೈಕೆ ಮಾಡಿ ರೈತಾಪಿ ಕುಟುಂಬಗಳಿಗೆ ಗೃಹ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಎಸ್.ವಿ.ರಂಗನಾಥ್ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
