
ಹಿರಿಯೂರು :
ರಾಜ್ಯದಾದ್ಯಂತ 10,000 ಯುವಸಂಘಗಳನ್ನು “ಭಾರತ್ ಜೋಡೋ” ಹೆಸರಿನಲ್ಲಿ ಸ್ಥಾಪಿಸುವ ಕರ್ನಾಟಕ ಸರ್ಕಾರದ ಕ್ರಮ ಖಂಡನೀಯ ಎಂದು ಬಿಜೆಪಿ ಯುವ ಮುಖಂಡ ಎನ್. ಧನಂಜಯ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಭಾರತ್ ಜೋಡೋ ಹೆಸರು ಕಾಂಗ್ರೆಸ್ ಪಕ್ಷದ ರಾಜಕೀಯ ಆಂದೋಲನದೊಂದಿಗೆ ತಳಕು ಹಾಕಿಕೊಂಡಿದ್ದು ಒಂದು ಪಕ್ಷದ ಘೋಷಣೆಯ ರೂಪದಲ್ಲಿ ಕಾಣಿಸುವ ಹೆಸರನ್ನು ಸಾಂಸ್ಥಿಕ ಗೊಳಿಸುವ ಪ್ರಯತ್ನಕ್ಕೆ ತೆರಿಗೆದಾರರ ಹಣ ಬಳಸುವುದು ಸರಿಯಲ್ಲ,
ಯುವಜನರನ್ನು ರಚನಾತ್ಮಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸುವ ಪ್ರಾಮಾಣಿಕ ಉದ್ದೇಶ ಇಲ್ಲಿ ಕಾಣುತ್ತಿಲ್ಲ ಕಾಂಗ್ರೆಸ್ ಪಕ್ಷ ತನ್ನ ರಾಜಕೀಯ ತತ್ವಗಳನ್ನು ಪ್ರಚುರ ಪಡಿಸುವ ಸಲುವಾಗಿ ಇವುಗಳನ್ನು ಸ್ಥಾಪಿಸುತ್ತಿದೆ ಎಂದರಲ್ಲದೆ,
ಕೃಷಿ ಮೂಲ ಸೌಕರ್ಯಗಳು ಹಾಗೂ ಸಾರ್ವಜನಿಕ ಸೇವಾ ವಲಯಗಳಂತಹ ತುರ್ತು ಅಗತ್ಯಗಳಿಗೆ ಹಣಕಾಸಿನ ಕೊರತೆ ಇರುವಾಗ ಹೊಸ ಯೋಜನೆಗೆ 1010 ಕೋಟಿ ವೆಚ್ಚ ಮಾಡುವ ಔಚಿತ್ಯವೇನಿದೆ ಎಂದು ಪ್ರಶ್ನಿಸಿದ ಅವರು ಚುನಾವಣೆಗಳು ಸನ್ನಿಹಿತವಾಗುತ್ತಿರುವ ಸಂದರ್ಭದಲ್ಲಿ ಆಡಳಿತ ಪಕ್ಷದ ಸಂಪರ್ಕಗಳನ್ನು ಬೇರು ಮಟ್ಟದಲ್ಲಿ ಬಲಪಡಿಸುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದ್ದಾರೆ.
