
ಹಿರಿಯೂರು :
ಪ್ರತಿಯೊಬ್ಬ ವ್ಯಕ್ತಿಯು ತನ್ನ ಸ್ವಂತಶಕ್ತಿಯ ಮೇಲೆ ನಂಬಿಕೆ ಇಡಬೇಕು, ಆಗ ಮಾತ್ರ ನಮ್ಮ ಆತ್ಮವಿಶ್ವಾಸ ಹೆಚ್ಚಾಗುವ ಮೂಲಕ ಯಶಸ್ಸು ಪಡೆಯಲು ಸಾಧ್ಯ ಎಂಬುದಾಗಿ ಹಿರಿಯೂರಿನ ಶಾರದಾಶ್ರಮದ ಮುಖ್ಯಸ್ಥೆ ಮಾತಾ ಚೈತನ್ಯಮಯಿ ಹೇಳಿದರು.

ನಗರದ ಎಎಂಎಸ್ ಇನ್ಫೋಟೆಕ್ ಕಂಪ್ಯೂಟರ್ ತರಬೇತಿ ಸಂಸ್ಥೆಯಲ್ಲಿ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ವಿವೇಕಾನಂದರ ವಿಚಾರ ಧಾರೆಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರಲ್ಲದೆ,
ಎಲ್ಲರಲ್ಲೂ ವಿಶಿಷ್ಟ ಶಕ್ತಿ ಇದೆ, ಯಾರೂ ತನ್ನನ್ನು ದುರ್ಬಲರು ಎಂದುಕೊಳ್ಳಬಾರದು, ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ, ಎಲ್ಲಾ ಶಕ್ತಿಯು ನಿನ್ನಲ್ಲಿದೆ ನೀನು ಏನನ್ನಾದರೂ ಮಾಡಬಲ್ಲೆ ಎನ್ನುವ ವಿವೇಕಾನಂದರ ಮಾತುಗಳು ನಮ್ಮೆಲ್ಲರಿಗೂ ಆದರ್ಶವಾಗಬೇಕು, ಮೊಬೈಲ್ ವ್ಯಸನದಿಂದ ಮಕ್ಕಳು ಹೊರಬರಬೇಕು ಅಧ್ಯಯನ ಶೀಲತೆಗೆ ಒತ್ತುಕೊಡಬೇಕು,

ಕೇವಲ ಮಾಹಿತಿ ಸಂಗ್ರಹ ಶಿಕ್ಷಣವಲ್ಲ, ವ್ಯಕ್ತಿತ್ವ ನಿರ್ಮಾಣ ಮತ್ತು ಚಾರಿತ್ರ್ಯ ವೃದ್ಧಿಯೇ ನಿಜವಾದ ಶಿಕ್ಷಣ, ಯುವಕರು ದೈಹಿಕವಾಗಿ ಸದೃಢ ಆಗಿರಬೇಕು, ಸದೃಢ ದೇಹದಲ್ಲಿ ಮಾತ್ರ ಸದೃಢ ಮನಸ್ಸು ಇರಲು ಸಾಧ್ಯ ಹಾಗೂ ರಾಷ್ಟ್ರ ನಿರ್ಮಾಣದ ಪಾತ್ರದಲ್ಲಿ ಯುವಕ ಯುವತಿಯರಾದ ತಾವೆಲ್ಲರೂ ಜಾಗೃತರಾಗಬೇಕು ಎಂದರು,

ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಕೆ.ರಂಗಪ್ಪ ಹಾಗೂ ಹಿರಿಯೂರು ತಾಲೂಕಿನ ಪ್ರಾಥಮಿಕ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸುನಂದಮ್ಮ, ಇವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಎಂ.ಎಸ್ ಇನ್ಫೋಟೆಕ್ ಕಂಪ್ಯೂಟರ್ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ರೋಹಿಣಿ ಮುರಳಿಧರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ರಾಷ್ಟೀಯ ಸೇವಾ ಪ್ರಶಸ್ತಿ ಪುರಸ್ಕೃತ ಪ್ರಾಂಶುಪಾಲ ಎನ್.ಧನಂಜಯ, ಎಎಂಎಸ್ ಮುರಳಿಧರ, ಬಸವರಾಜ ನರ್ಸಿಂಗ್ ಕಾಲೇಜ್ ಪ್ರಾಂಶುಪಾಲರಾದ ಸಂದೀಪ್ ಯಾದವ್, ಗೋಕುಲ್ ಸ್ಟುಡಿಯೋ ಗೋವಿಂದ್, ಸೃಷ್ಟಿ ಜ್ಯುಯಲರ್ಸ್ ಎಲ್.ಜಿ. ಅನಿತಾ ಮಾರುತಿ, ಹಾಗೂ ನೂರಾರು ಪಿಯು ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
