
ಹಿರಿಯೂರು :
ವಿವಿಸಾಗರ ಜಲಾಶಯದ ಪ್ರವೇಶ ದ್ವಾರದಲ್ಲಿರುವ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವ ಕಾಲುವೆಗೆ ನಿರ್ಮಿಸಿರುವ ಸೇತುವೆ ಪ್ರಾಣಪಾಯಕ್ಕೆ ಆಹ್ವಾನ ನೀಡುವಂತಿದೆ. ಇದು ಗೊತ್ತಿದ್ದು ಇಲಾಖೆ ಅಧಿಕಾರಿಗಳು ಜಾಣಮೌನದಲ್ಲಿದ್ದಾರೆ ಎಂಬುದಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಕೆ.ಜಿ.ಹನುಮಂತರಾಯಪ್ಪ ಹಾಗೂ ವಿವಿಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚು ಕಟ್ಟುದಾರ ರೈತರ ಹಿತರಕ್ಷಣ ಸಮಿತಿ ಅಧ್ಯಕ್ಷರಾದ ಕಸವನಹಳ್ಳಿರಮೇಶ್, ವಾಣಿವಿಲಾಸಪುರ ಪತ್ರಿಕಾ ವಿತರಕರಾದ ಬಿ.ಚಂದ್ರಕಾಂತ ಇವರುಗಳು ಆರೋಪಿಸಿದ್ದಾರೆ.

ಪ್ರತಿದಿನ ಸಾವಿರಾರು ಜನ ಪ್ರವಾಸಿಗರು ವಿವಿಸಾಗರ ಜಲಾಶಯ ನೋಡಲು ಹಾಗೂ ಭಕ್ತರು ಕಣಿವೆ ಮಾರಮ್ಮ ದೇವಸ್ಥಾನಕ್ಕೆ ಭೇಟಿಕೊಡುತ್ತಾರೆ. ಅದರಲ್ಲೂ ಮೊಬೈಲ್ ಕಾಲದಲ್ಲಿ ಸೆಲ್ಫಿಯ ಹುಚ್ಚಿಗೆ ಪ್ರಾಣವನ್ನೇ ಬಲಿ ಕೊಟ್ಟ ಉದಾಹರಣೆಗಳಿವೆ. ಕಳೆದ ಬಾರಿ ನೀರು ಬಿಟ್ಟಾಗ ನಮ್ಮ ತಾಲೂಕಿನ ಒಬ್ಬರು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣಬಿಟ್ಟರು. ಇದೇ ರೀತಿ ನೂರಾರು ಸಣ್ಣಪುಟ್ಟ ಅಪಾಯಗಳು ಸಂಭವಿಸುತ್ತಿರುತ್ತವೆ.
ಹಲವು ಹುಡುಗರು ಈ ಸೇತುವೆಯಿಂದ ನೀರಿನಲ್ಲಿ ಜಿಗಿಯುವುದು ಇತ್ಯಾದಿ ಅಪಾಯಕಾರಿ ಆಟಗಳನ್ನು ಆಡುತ್ತಾರೆ.ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದರು ಕೂಡ ದುರಸ್ತಿಯಾಗಿಲ್ಲ, ನೂರಾರು ವರ್ಷಗಳ ಇತಿಹಾಸವುಳ್ಳ ವಾಣಿವಿಲಾಸಸಾಗರಕ್ಕೆ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಪ್ರತಿನಿತ್ಯ ಬರುವುದರಿಂದ ತುರ್ತಾಗಿ ಈ ಸೇತುವೆ ದುರಸ್ತಿ ಕಾರ್ಯ ಮಾಡಿಕೊಡಲು ಗ್ರಾಮಸ್ಥರ ಪರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಮನವಿ ಮಾಡಿದ್ದಾರೆ.
