
ಹಿರಿಯೂರು :
ವಿಶ್ವಮಟ್ಟದಲ್ಲಿ ವಿಶ್ವಶಾಂತಿ ಸೌಹಾರ್ದತೆಗೆ ರೆಡ್ ಕ್ರಾಸ್ ಘಟಕ ಮಾದರಿಯಾಗಿದೆ, ಸಮಾಜದಲ್ಲಿ ಶಾಂತಿ ಸೌಹಾರ್ದತೆ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸ್ನೇಹ, ಪ್ರೀತಿ, ವಿಶ್ವಾಸ, ಹೊಂದಿದಂತಹ ಹೊಂದಾಣಿಕೆ ಮನೋಭಾವ ಬೆಳೆಸಿಕೊಳ್ಳಬೇಕು ಎಂಬುದಾಗಿ ಯೂಥ್ ರೆಡ್ ಕ್ರಾಸ್ ಘಟಕದ ಕೋ ಆರ್ಡಿನೇಟರ್ ಶಶಿಕಲಾ ರವಿಶಂಕರ್ ಹೇಳಿದರು.
ನಗರದ ವಾಣಿಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಘಟಕ, ಯೂತ್ ರೆಡ್ ಕ್ರಾಸ್ ಘಟಕ,ವಾಣಿ ಕಾಲೇಜು, ಇವರುಗಳ ಸಂಯುಕ್ತಾಶ್ರಯದಲ್ಲಿ ಜಿನೀವಾ ಒಪ್ಪಂದದ ದಿನಾಚರಣೆ ಅಂಗವಾಗಿ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ “ಸಾಮಾಜಿಕಅರಿವು ಹಾಗೂ ಜಾಥಾ” ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ವಿಶ್ವದ ಇತಿಹಾಸದಲ್ಲಿ ಮಾನವನ ಬದುಕು ಸಾಧನೆ ಸದಾ ಜೀವಂತವಾಗಿರುತ್ತದೆ, ಜೀನೀವ ಒಪ್ಪಂದದ ಸಂದರ್ಭದಲ್ಲಿ ಶತ್ರು ಪಕ್ಷ ಎನ್ನದೆ ಮಿತ್ರ ಪಕ್ಷ ಎನ್ನದೆ ಸಾವು ನೋವು ನೋಡಿ ಮಾನವೀಯತೆಯಿಂದ ವೈದ್ಯಕೀಯ ನೆರವನ್ನು ನೀಡಿದವರು “ಏನ್ರೀ ಡೊನಾಲ್ಟಟ್” ಅವರ ಸೇವೆ ಎಂದಿಗೂ ವಿಶ್ವದಲ್ಲಿ ಮಾದರಿಯಾಗಿ ಉಳಿದಿದೆ, ಅವರ ಸವಿನೆನಪಿಗಾಗಿ ವಿಶ್ವದಲ್ಲಿ “ರೆಡ್ ಕ್ರಾಸ್ ಸಂಸ್ಥೆ”ಯನ್ನ ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಬಿ.ಆರ್.ಹೇಮಲತಾ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯ ಮೂಲ ಉದ್ದೇಶಗಳು ಗುರಿಗಳು ಸಮಾಜಮುಖಿ ಪ್ರಗತಿಪರ ಚಿಂತನೆಗೆ ಪೂರಕವಾಗಿವೆ, ಸಮಾಜದ ಪ್ರತಿಯೊಬ್ಬರೂ ಸೌಹಾರ್ದತೆಯನ್ನು ಬೆಳೆಸಿಕೊಳ್ಳಬೇಕು ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚೇರ್ಮನ್ ಹೆಚ್.ಎಸ್.ಸುಂದರರಾಜ್, ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಭಾರತೀಯರ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ,ಎಸ್, ರಾಘವೇಂದ್ರ, ರಾಜ್ಯ ಸಮಿತಿ ಸದಸ್ಯರಾದ ಅನಂತರೆಡ್ಡಿ, ಪ್ರೊ.ಬಿ.ಕೆ.ನಾಗಣ್ಣ, ಬಸವರಾಜ್ ಟಿ ಬೆಳಗಟ್ಟಿ, ಬಿ.ಟಿ.ಭರತ್, ಎಸ್.ಎಂ.ವೀರೇಶ್ ಡಾ.ಎ.ದೇವಿಕಾ, ಮಹಮದ್ ಸಾದತ್, ನರಸಿಂಹಮೂರ್ತಿ, ಎಚ್.ಎಸ್. ಚಂದ್ರವದನ , ಎಂ.ವಿ.ನಾಗರತ್ನಮ್ಮ, ಸರೋಜಮ್ಮ ಹಾಗೂ ಇತರರು ಉಪಸ್ಥಿತರಿದ್ದರು.
