
ಹಿರಿಯೂರು :
ಪರಿಶಿಷ್ಟ ಪಂಗಡ (ಎಸ್.ಟಿ) ಸಮುದಾಯದ ಸಂವಿಧಾನ ಬದ್ಧ ಹಕ್ಕುಗಳು ಮತ್ತು ಕಾನೂನು ಬದ್ಧ ಮೀಸಲಾತಿ ರಕ್ಷಣೆಗಾಗಿ ಸಮಾಜದ ಪ್ರತಿಯೊಬ್ಬರೂ ಜಾಗೃತರಾಗುವ ಮೂಲಕ ಸಂಘಟಿತರಾಗಿ ಹೋರಾಟವನ್ನು ನಡೆಸಬೇಕಿದೆ ಎಂಬುದಾಗಿ ಎಸ್.ಟಿ.ಮೋರ್ಚಾ ಜಿಲ್ಲಾಧ್ಯಕ್ಷರಾದ ಜೆ.ಬಿ.ರಾಜು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಎಸ್.ಟಿ.ಮೋರ್ಚಾದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಜುಲೈ 19 ರಂದು ಚಳ್ಳಕೆರೆಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲಾ ನಾಯಕ ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧ್ವನಿ ಎತ್ತುವ ಮೂಲಕ ಸಮುದಾಯ ಬಲಪಡಿಸಬೇಕು ಎಂದರು.
ಜುಲೈ 19ರಂದು ಚಳ್ಳಕೆರೆ ನಗರದ ಗುರು ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಎಸ್.ಟಿ ಜಾಗೃತಿ ಸಮಾವೇಶದಲ್ಲಿ ಸಾವಿರಾರು ಎಸ್.ಟಿ ಸಮುದಾಯದ ಜನರು ಭಾಗವಹಿಸಿ ತಮ್ಮ ಹಕ್ಕುಗಳು, ಶಿಕ್ಷಣ ,ಉದ್ಯೋಗ, ಮೀಸಲಾತಿ ಹಾಗೂ ಅಭಿವೃದ್ಧಿ ಯೋಜನೆಗಳ ಕುರಿತು ಧ್ವನಿ ಎತ್ತಬೇಕು, ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಮೂಲಧಾರವಾಗಿದೆ ಎಂದರಲ್ಲದೆ,
ಯಾವುದೇ ಕಾರಣಕ್ಕೂ ನಮ್ಮ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಸರ್ಕಾರಗಳು ವಿದ್ಯಾರ್ಥಿಗಳ ಶಿಕ್ಷಣ, ವಿದ್ಯಾರ್ಥಿ ವೇತನ ಹಾಗೂ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣ ಪಡೆದ ಯುವಕರು ಸಮಾಜದ ಪರಿವರ್ತನೆಗೆ ಶಕ್ತಿಯಾಗಲಿದ್ದು, ಪೋಷಕರು ಮಕ್ಕಳ ವಿದ್ಯಾಭ್ಯಾಸವನ್ನು ವಿಶೇಷ ಗಮನ ಹರಿಸಬೇಕೆಂದು ತಿಳಿಸಿದರು.
ವಾಲ್ಮೀಕಿ ಸಮುದಾಯಕ್ಕೆ ಸಂವಿಧಾನ ಬದ್ಧವಾಗಿ ದೊರಕಬೇಕಾದ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ವಿಳಂಬ ನೀತಿ ಅನುಸರಿಸಿದ್ದು, ಇದರಿಂದ ಸಮುದಾಯಕ್ಕೆ ಅನ್ಯಾಯವಾಗಿದೆ, ಪರಿಶಿಷ್ಟ ಪಂಗಡ (ಎಸ್.ಟಿ) ಸಮುದಾಯದ ಕಾನೂನು ಬದ್ಧ ಮೀಸಲಾತಿ ಜಾರಿಯಾಗುವವರೆಗೆ ಬಿಜೆಪಿ ಎಸ್ ಟಿ ಮೋರ್ಚಾ ಮುಂದುವರೆಯಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಟಿ.ರಾಜೇಶ್ವರಿ ರವರು, ಸಮಾಜದ ಹಿರಿಯ ಮುಖಂಡರಾದ ಬಸವರಾಜನಾಯಕ, ಲೋಕೇಶ್,ವಿಶ್ವನಾಥ್, ರಾಮಾಂಜನೇಯ, ಎಸ್ ಟಿ ಮೋರ್ಚಾ ತಾಲೂಕು ಅಧ್ಯಕ್ಷರಾದ ಪ್ರಜ್ವಲ್ ಹೆಚ್ ಕೆ, ನಿಕಟ ಪೂರ್ವ ಅಧ್ಯಕ್ಷರಾದ ದೇವರಾಜು, ಎಸ್ ಟಿ ಮೋರ್ಚಾ ತಾಲೂಕು ಉಪಾಧ್ಯಕ್ಷ ಹರ್ತಿರಾಜ್, ಪಾಂಡುರಂಗಪ್ಪ, ದಕ್ಷಿಣಮೂರ್ತಿ,ಪ್ರಧಾನ ಕಾರ್ಯದರ್ಶಿ ದಯಾನಂದ, ಓಬ್ಬಳೇಶ್, ಎನ್ ನಾಗರಾಜ್, ಶಶಿಕುಮಾರ್, ಸೊಂಡೆಕೆರೆ ಜಯರಾಮ್, ಅನಿಲ್, ಮಂಜುನಾಥ್ , ಶ್ರೀನಿವಾಸ್, ಕರಿಯಪ್ಪ,ಸುರೇಶ್ ಹೇಮದಳ ಮಂಜುನಾಥ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
