
ಹಿರಿಯೂರು :
ನಗರದ ನಿವಾಸಿಗಳು ಮನೆಯ ತ್ಯಾಜ್ಯವನ್ನು ರಾಜಕಾಲುವೆಗೆ ಸುರಿಯಬಾರದು ಜೊತೆಗೆ ಮನೆಯ ಮುಂದಿನ ಬಾಕ್ಸ್ ಚರಂಡಿಗಳ ಮೇಲೆ ಕಾಂಪೌಂಡ್ ನಿರ್ಮಿಸಿದಂತೆ ಕಾಲುವೆ ಒತ್ತುವರಿ ಮಾಡಬಾರದು ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ಮನೆ ಮಾಲೀಕರುಗಳಿಗೆ ಸೂಚನೆ ನೀಡಿದ್ದಾರೆ.
ಈ ರೀತಿ ಮಾಡುವುದರಿಂದ ಮಳೆಯ ನೀರು ಕಟ್ಟಿಕೊಂಡು ಒತ್ತಡ ಹೆಚ್ಚಾದಾಗ ನೀರು ಒಮ್ಮೆಲೇ ನುಗುತ್ತದೆ, ಇದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತದೆ, ಮನೆ ಮಾಲೀಕರು ನಿಯಮ ಪಾಲಿಸದಿದ್ದರೆ ಅನಿವಾರ್ಯವಾಗಿ ಕಾನೂನುಕ್ರಮವನ್ನು ಎಂಬುದಾಗಿ ಪೌರಾಯುಕ್ತರಾದ ಎ.ವಾಸೀಂ ಎಚ್ಚರಿಸಿದ್ದಾರೆ.
ಈ ನಿಟ್ಟಿನಲ್ಲಿ ಮಳೆಗಾಲ ಆರಂಭಕ್ಕೂ ಮೊದಲು ನಗರದಲ್ಲಿರುವ ರಾಜ ಕಾಲುವೆಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿರುವ ನಗರಸಭೆ ಆಡಳಿತದ ಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗಿದೆ. ಪಾರಾಯುಕ್ತರಾದ ಎ.ವಾಸೀಂ, ಆರೋಗ್ಯ ನಿರೀಕ್ಷಕರುಗಳು ಪೌರ ನೌಕರರ ಸಭೆ ನಡೆಸಿ ಆಕಾಲಿಕ ಮಳೆಯಿಂದ ಉಂಟಾಗಬಹುದಾದ ಹಾನಿ ತಡೆಯಲು ಕ್ರಮಕ್ಕೆ ಮುಂದಾಗಿದ್ದಾರೆ.
ಆಶ್ರಯ ಕಾಲೋನಿಯಿಂದ ಆರಂಭವಾಗುವ ರಾಜ ಕಾಲುವೆ, ವಾಗ್ದೇವಿ ಶಿಕ್ಷಣ ಸಂಸ್ಥೆ ಮತ್ತು ಕಟುಗರ ಹಳ್ಳದ ರಾಜಕಾಲುವೆಗಳನ್ನು ಗುರುವಾರ ಸ್ವಚ್ಛಗೊಳಿಸಿದ್ದಾರೆ. ಹಿಂದಿನ ವರ್ಷ ಒಂದೇ ರಾತ್ರಿ 50 ಮಿಲಿ ಮೀಟರ್ ಗಿಂತ ಹೆಚ್ಚು ಮಳೆ ಸುರಿದ ಕಾರಣ ರಾಜ ಕಾಲುವೆಗಳಿಂದ ನೀರು ಹರಿದು ಬಂದು ಬಡಾವಣೆಗಳಿಗೆ ನುಗ್ಗಿತ್ತು ಹಾಗಾಗಿ ಈ ಬಾರಿ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ರಾಜ ಕಾಲುಗಳನ್ನು ಸ್ವಚ್ಛಗೊಳಿಸಲಾಗಿದೆ ಎಂಬುದಾಗಿ ಪೌರಾಯುಕ್ತರಾದ ಎ.ವಾಸೀಂ ತಿಳಿಸಿದ್ದಾರೆ.
