
ಹಿರಿಯೂರು :
ತಾಲೂಕಿನ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದಿರುವ ತೆಂಗು, ಅಡಿಕೆ, ಬಾಳೆ, ಪಪ್ಪಾಯಿ, ದಾಳಿಂಬೆ, ಇತ್ಯಾದಿ ತೋಟಗಾರಿಕೆ ಬೆಳೆಗಳು ಮತ್ತು ಅಲ್ಪಾವಧಿ ಬೆಳೆಗಳು ಒಣಗುತ್ತಿರುವುದರಿಂದ ಸಕಾಲಕ್ಕೆ ಮಳೆಯಾಗದೆ ಅಂತರ್ಜಲ ಕಡಿಮೆಯಾಗಿ ಬೋರ್ವೆಲ್ ಗಳಲ್ಲಿ ನೀರು ಬತ್ತಿರುವುದರಿಂದ ತೋಟಗಾರಿಕೆ ಮತ್ತು ಇತರೆ ಬೆಳೆಗಳಿಗೆ ವಿವಿಸಾಗರ ಜಲಾಶಯದಿಂದ ಎಡ ಮತ್ತು ಬಲ ಕಾಲುವೆಗಳ ಮುಖಾಂತರ ನೀರು ಹರಿಸಬೇಕು ಎಂಬುದಾಗಿ ಮಧ್ಯಕರ್ನಾಟಕ ರಾಜ್ಯ ವಿಭಾಗೀಯ ಉಪಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ ಹೇಳಿದರು.
ನಗರದ ವಿಶ್ವೇಶ್ವರಯ್ಯ ಜಲನಿಗಮದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಆವರಣದಲ್ಲಿ ರಾಜ್ಯ ರೈತಸಂಘದ ವತಿಯಿಂದ ವಿವಿಸಾಗರ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ಎಡ ಮತ್ತು ಬಲ ಕಾಲುವೆಗಳಿಂದ ನೀರು ಹರಿಸುವಂತೆ ಒತ್ತಾಯಿಸಿ, ಸಹಾಯಕ ಕಾರ್ಯಪಾಲಕ ಅಭಿಯಂತರರು ಇವರ ಮುಖಾಂತರ ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿ ಅವರು ಮಾತನಾಡಿದರು.
ವಿವಿಸಾಗರ ಜಲಾಶಯದಲ್ಲಿ ಸುಮಾರು 126.40 ಅಡಿಗಿಂತ ಹೆಚ್ಚು ನೀರು ಇರುವುದರಿಂದ ಜಲಾಶಯದಿಂದ ನೀರು ಹರಿಸುವುದರಿಂದ ನೀರಿನ ಅಭಾವ ಉಂಟಾಗುವುದಿಲ್ಲವೆಂಬ ಭಾವನೆ ತಾಲೂಕಿನ ರೈತರಲ್ಲಿದ್ದು, ಶೀಘ್ರದಲ್ಲೇ ನೀರು ಹರಿಸುವ ಮೂಲಕ ರೈತರ ನೆರವಿಗೆ ಧಾವಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ರೈತಸಂಘದ ಮಧ್ಯ ಕರ್ನಾಟಕ ರಾಜ್ಯ ವಿಭಾಗೀಯ ಉಪಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ, ತಾಲೂಕು ಅಧ್ಯಕ್ಷರಾದ ಬಿ.ಓ.ಶಿವಕುಮಾರ್, ತಾಲೂಕು ಯುವಘಟಕದ ಅಧ್ಯಕ್ಷರಾದ ಆರ್.ಚೇತನ್ ಯಳನಾಡು, ತಾಲೂಕು ಕಾರ್ಯಾಧ್ಯಕ್ಷರಾದ ಹೆಚ್.ದಸ್ತಗಿರಿಸಾಬ್, ಉಪಾಧ್ಯಕ್ಷರಾದ ತಿಪ್ಪೇಸ್ವಾಮಿಮೇಟಿಕುರ್ಕೆ, ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮೀಕಾಂತ್, ನಾಗರಾಜ್, ಗಿರೀಶ್, ಮರದಮುತ್ತು, ಅಜಯ್, ಮುನಿಸ್ವಾಮಿ, ರಮೇಶ್, ಪ್ರಸನ್ನ, ಶ್ರೀನಿವಾಸ್, ಈಶ್ವರಪ್ಪ, ಅನ್ವರ್ ಅಲಿ, ಮುನಿಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
