
ಹಿರಿಯೂರು:
ಬರಡು ರಾಸುಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿ ಅವುಗಳನ್ನು ಫಲವತ್ತಾಗಿಸುವುದು ಮತ್ತು ಹೈನುಗಾರಿಕೆಯಲ್ಲಿ ರೈತರು ಆದಾಯ ಹೆಚ್ಚಿಸಿಕೊಳ್ಳಬೇಕು ಎಂಬುದಾಗಿ ಶಿಮುಲ್ ನಿರ್ದೇಶಕರಾದ ಬಿ.ಸಿ.ಸಂಜೀವಮೂರ್ತಿ ಅವರು ಹೇಳಿದರು.
ತಾಲ್ಲೂಕಿನ ಗೌಡನಳ್ಳಿ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಿರಿಯೂರು, ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಹಾಗೂ ಗೌಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಿಶ್ರತಳಿ ಹಸು, ಕರುಗಳ ಪ್ರದರ್ಶನ ಮತ್ತು ಬರಡು ರಾಸುಗಳ ಚಿಕಿತ್ಸಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಸುಗಳಿಗೆ ಆಯೋಜಿಸಿರುವ ಉಚಿತ ಆರೋಗ್ಯ ಶಿಬಿರಗಳು ರೈತರಿಗೆ ವರದಾನವಾಗಿವೆ. ಇದರಿಂದ ರೈತರಲ್ಲಿ ಆತಂಕ ಉಂಟುಮಾಡಿದೆ. ರಾಸುಗಳ ಆರೋಗ್ಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಮಾಡದೆ ಸೂಕ್ತ ತಪಾಸಣೆ ಮಾಡಿಸಿ ಚಿಕಿತ್ಸೆ ಕೊಡಿಸಬೇಕು.ರಾಸುಗಳ ಬಗ್ಗೆ ಪಶುವೈದ್ಯರಿಂದ ಉತ್ತಮ ಮಾಹಿತಿ ಪಡೆದುಕೊಂಡಲ್ಲಿ ರೈತರಿಗೆ ತುಂಬಾ ಅನುಕೂಲಕರವಾಗಲಿದೆ. ಎಂದರಲ್ಲದೆ,
ರಾಸುಗಳ ಪ್ರದರ್ಶನ ಶಿಬಿರಗಳ ಕ್ಯಾಂಪ್ ಮಾಡಿದಾಗ ಬಹುಮಾನ ನೀಡಲು ಶಿಮುಲ್ ನಿಂದ 10ಸಾವಿರ ರೂಪಾಯಿ ಬಹುಮಾನವಾಗಿ ಸಂಘಕ್ಕೆ ಕೊಡಲಾಗುತ್ತಿತ್ತು. ನಾವು ಆಡಳಿತಕ್ಕೆ ಬಂದ ಮೇಲೆ 15 ಸಾವಿರ ರೂಪಾಯಿಗಳನ್ನುನೀಡಲಾಗುತ್ತಿದೆ ಎಂಬುದಾಗಿ ಅವರು ಹೇಳಿದರು.

ಹೊಸದುರ್ಗ ಶಿಮುಲ್ ನಿರ್ದೇಶಕರಾದ ಬಿ.ಆರ್.ರವಿಕುಮಾರ್ ಅವರು ಮಾತನಾಡಿ ಗ್ರಾಮೀಣ ಪ್ರದೇಶದ ಪ್ರಮುಖ ಆದಾಯ ಮೂಲ ಪಶುಸಂಗೋಪನೆ, ಹಾಲಿನ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಿಸಲು ಹಸುಗಳಿಗೆ ಪ್ರೋಟೀನ್ ಯುಕ್ತ ಆಹಾರವನ್ನು ನೀಡಬೇಕು. ಇದರಿಂದ ಹಾಲಿನಲ್ಲಿ ಫ್ಯಾಟ್ ಪ್ರಮಾಣ ಹೆಚ್ಚುತ್ತಿರುವುದರಿಂದ ರೈತರಿಗೆ ಹೆಚ್ಚಿನ ಆದಾಯ ಸಿಗಲಿದೆ ಎಂಬುದಾಗಿ ಅವರು ಹೇಳಿದರು.
ಹೊಳಲ್ಕೆರೆ ಶಿಮುಲ್ ನಿರ್ದೇಶಕರಾದ ಜೆ.ಬಿ.ಶೇಖರಪ್ಪ ಅವರು ಮಾತನಾಡಿ ಹಾಲು ಉತ್ಪಾದಕರ ಸಹಕಾರ ಸಂಘವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಶಿಮುಲ್ ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂಬುದಾಗಿ ಅವರು ಹೇಳಿದರು.
ಉತ್ತಮವಾಗಿ ಹಸು ಕರುಗಳ ಸಾಕಾಣಿಕೆ ಮಾಡಿದ ಮಾಲಿಕರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಅಧ್ಯಕ್ಷರಾದ ಆರ್.ರಾಘವೇಂದ್ರ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಚಳ್ಳಕೆರೆ ಉಪವಿಭಾಗಾಧಿಕಾರಿ ಎಂ.ಪುಟ್ಟರಾಜು ವಿಸ್ತರಣಾಧಿಕಾರಿ ಎಸ್.ಜಿ. ಕೃಷ್ಣಕುಮಾರ್, ತಾಲ್ಲೂಕು ಪಶುವೈದ್ಯಾಧಿಕಾರಿ ಡಾ.ಹುಸೇನ್, ಡಾ.ನಾಗರಾಜ್, ಪಶುವೈದ್ಯಾಧಿಕಾರಿಗಳಾದ ಡಾ.ನರೇಶ್, ಡಾ.ಮೋಹನ್ ಕುಮಾರ್, ಡಾ.ಅರುಣ್ ಸೇರಿದಂತೆ ಸಂಘದ ಆಡಳಿತ ಮಂಡಳಿ ನಿರ್ದೇಶಕರು, ಸಂಘದ ಸಿಬ್ಬಂದಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
