
ಹಿರಿಯೂರು:
ಚಿತ್ರದುರ್ಗ ಜಿಲ್ಲಾ ಯಾದವ ಗೊಲ್ಲ ಸಂಘಕ್ಕೆ ಅಂಟಿರುವ ತೊಡಕುಗಳನ್ನು ಸರಿಪಡಿಸಿಕೊಂಡು ಜಿಲ್ಲೆಯ ಗೊಲ್ಲ ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡುತ್ತೇವೆ ಎಂಬುದಾಗಿ ನೂತನ ಚುನಾಯಿತ ನಿರ್ದೇಶಕ ಪ್ರಕಾಶ್ ಮಂಗುಸುವಳ್ಳಿ ಅಭಿಮತ ವ್ಯಕ್ತಪಡಿಸಿದರು.
ತಾಲೂಕು ಯಾದವ ಗೊಲ್ಲ ಸಂಘ ಹಾಗೂ ತಾಲೂಕು ಯಾದವ ಗೊಲ್ಲ ನೌಕರರ ಸಂಘದ ವತಿಯಿಂದ ಇತ್ತೀಚೆಗೆ ನಡೆದ ಜಿಲ್ಲಾ ಯಾದವ ಗೊಲ್ಲ ಸಂಘದ ಚುನಾವಣೆಗೆ ಸ್ಪರ್ಧಿಸಿದ್ದ ಹಾಗೂ ಚುನಾವಣೆಯನ್ನು ಯಶಸ್ವಿ ಮಾಡಲು ಸಹಕರಿಸಿದ ಮುಖಂಡರುಗಳಿಗೆ ಶ್ರೀಕೃಷ್ಣ ದೇವಸ್ಥಾನ ಆವರಣದಲ್ಲಿ ಏರ್ಪಡಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಥಮ ಬಾರಿಗೆ ಜಿಲ್ಲಾ ಗೊಲ್ಲ ಯಾದವ ಸಂಘಕ್ಕೆ ಇದೀಗ ಚುನಾವಣೆ ನಡೆದಿದ್ದು, ಇದುವರೆಗೆ ಸಂಘದಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ನಮ್ಮ ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಲು ಮೊದಲ ಆದ್ಯತೆ ನೀಡುತ್ತೇವೆ ಎಂದು ಅವರು ತಿಳಿಸಿದರು.
ತಾಲೂಕು ಗೊಲ್ಲ ಯಾದವ ಸಂಘದ ಅಧ್ಯಕ್ಷರಾದ ಶ್ರೀ ಆರ್.ರಂಗಸ್ವಾಮಿ ರವರು ಮಾತನಾಡಿ, ಜಿಲ್ಲಾ ಸಂಘದಲ್ಲಿ ಇದುವರೆಗೆ ಇದ್ದ ಆಡಳಿತ ಮಂಡಳಿಯಿಂದ ಅನೇಕ ಅವ್ಯವಹಾರಗಳು ನಡೆದಿದ್ದು, ಈ ಎಲ್ಲಾ ಅವ್ಯವಹಾರಗಳನ್ನು ಹೊರತೆಗೆದು ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಕ್ರಮವನ್ನು ವಹಿಸಬೇಕು ಎಂಬುದಾಗಿ ಒತ್ತಾಯಿಸಿದರು.

ಜಿಲ್ಲೆಯ ಗೊಲ್ಲರಹಟ್ಟಿಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ ನಮ್ಮ ಗೊಲ್ಲರಹಟ್ಟಿಗಳ ಅಭಿವೃದ್ಧಿಗೆ ಶ್ರಮಿಸುವಂತಹ ಚುನಾಯಿತ ಪ್ರತಿನಿಧಿಗಳನ್ನು ನಾವು ಬೆಂಬಲಿಸಬೇಕು. ಈ ಜಿಲ್ಲಾ ಸಂಘದ ಚುನಾವಣೆಗೆ ನಮ್ಮ ಸಮಾಜದ ಅನೇಕ ಮುಖಂಡರುಗಳು ಸಹಕಾರ ನೀಡಿದ್ದು ಅವರಿಗೆ ಇಂದು ನಾವು ಕೃತಜ್ಞತರಾಗಿರಬೇಕು ಎಂದು ಸ್ಮರಿಸಿದರು.
ಪುರಸಭೆ ಮಾಜಿ ಸದಸ್ಯ ಬಿಕೆ ಕರಿಯಪ್ಪ ಮಾತನಾಡಿ, ಜಿಲ್ಲಾ ಯಾದವ ಸಂಘಕ್ಕೆ ಉತ್ತಮ ಗೌರವವಿದ್ದು ನೂತನ ನಿರ್ದೇಶಕರುಗಳು ಜಿಲ್ಲೆಯಲ್ಲಿ ಸಮಾಜದ ಏಳಿಗೆಗೆ ಶ್ರಮಿಸಬೇಕು ಮತ್ತು ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಸಮಾಜವನ್ನು ಒಗ್ಗಟ್ಟಿನಿಂದ ತೆಗೆದುಕೊಂಡು ಹೋಗಬೇಕು ಎಂಬುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಯಾದವ ಗೊಲ್ಲ ಸಂಘದ ಅಧ್ಯಕ್ಷರಾದ ಆರ್.ರಂಗಸ್ವಾಮಿ ರವರು ವಹಿಸಿದ್ದರು. ಸಭೆಯಲ್ಲಿ ನೂತನ ನಿರ್ದೇಶಕರಾದ ಬಿ.ಡಿ.ಬಸವರಾಜು, ಆಕರ್ಷ ಯಾದವ್, ಗೊಲ್ಲಹಳ್ಳಿ ಪರಮೇಶ್, ಅಶೋಕ್ , ವೀರೇಶ್, ಚಿತ್ತಪ್ಪ, ರೇವಣಸಿದ್ದಪ್ಪ ರವರು , ತಾಲೂಕು ಯಾದವ ಗೊಲ್ಲ ನೌಕರ ಸಂಘದ ಅಧ್ಯಕ್ಷ ಹೆಚ್. ತಿಪ್ಪೇಸ್ವಾಮಿ, ನಗರ ಸಭೆ ಮಾಜಿ ಸದಸ್ಯ ವಿ ಶಿವಣ್ಣ, ಚಿತ್ರಜಿತ್ ಯಾದವ್, ಶಿವಾನಂದ ಮಾಸ್ಟರ್, ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಎ.ಜಿ .ತಿಮ್ಮಯ್ಯ, ಮದನಕುಂಟೆ ನಾಗಪ್ಪ, ಕೋರ್ಟ್ ನಾಗಣ್ಣ, ರಂಗನಾಥ್, ಬಂಗಾರಪ್ಪ, ಬೆನಕನಹಳ್ಳಿ ಶಿವಮೂರ್ತಿ, ನಿತ್ಯಾನಂದ ಯಾದವ್, ನಿರಂಜನ್, ಡಾಬಾ ಚಿಕ್ಕಣ್ಣ, ಕೊನಿಕೆರೆ ರಾಮಣ್ಣ, ಸಂಪತ್ ಕುಮಾರ್, ಕೃಷ್ಣಮೂರ್ತಿ ತಮ್ಮಣ್ಣ, ಪ್ರಹ್ಲಾದ್, ಮುರುಳಿ, ಉಮೇಶ್ , ಕಾಂತರಾಜು, ಚಿತ್ತಯ್ಯ , ರಾಮು, ತಿಮ್ಮಣ್ಣ, ಪ್ರಸನ್ನ ಕುಮಾರ್, ಸಿದ್ದಪ್ಪ, ರಂಗಸ್ವಾಮಿ, ಜಯಲಿಂಗಪ್ಪ, ಈರಣ್ಣ ಇತರರು ಉಪಸ್ಥಿತರಿದ್ದರು.
