
ಹಿರಿಯೂರು:
ಇಂದಿನ ಆಧುನಿಕ ಜಗತ್ತಿನಲ್ಲಿ ಯುವಜನತೆ ಅತಿಯಾದ ಒತ್ತಡ, ಫಾಸ್ಟ್ ಫುಡ್ ಹಾಗೂ ಮಾದಕ ವಸ್ತುಗಳನ್ನು ಸೇವನೆಯಿಂದ ಬಹುಬೇಗ ಹೃದಯ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುತ್ತಿದ್ದು, ಇದು ನಿಲ್ಲಬೇಕಾದರೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಅತ್ಯಗತ್ಯವಾಗಿದೆ ಎಂಬುದಾಗಿ ಬಸವೇಶ್ವರ ಆಸ್ಪತ್ರೆ ಹೃದಯ ರೋಗ ತಜ್ಞ ಆರ್.ಎಸ್ ಕಾರ್ತಿಕ್ ಹೇಳಿದರು.
ತಾಲೂಕಿನ ಮೇಟಿಕುರ್ಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರದಂದು ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕ ಚಿತ್ರದುರ್ಗ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ ಹಾಗೂ ಇಂಡಿಯಾನ-ಎಸ್.ಜೆ.ಎಂ. ಹಾರ್ಟ್ ಸೆಂಟರ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹೃದಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಉತ್ತಮ ಆಹಾರ ಸೇವನೆ, ದುಶ್ಚಟಗಳಿಂದ ದೂರವಿರುವುದು, ಯೋಗ-ಪ್ರಾಣಾಯಾಮದ ಅಭ್ಯಾಸ, ಒತ್ತಡ ರಹಿತ ನೆಮ್ಮದಿಯ ಬದುಕು ಸಾಗಿಸುವ ಮೂಲಕ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವ ಜೊತೆಗೆ ನಿಮ್ಮನ್ನೇ ನಂಬಿ ಬದುಕುತ್ತಿರುವ ನಿಮ್ಮ ಕುಟುಂಬದ ಸುರಕ್ಷಿತವಾಗಿ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಬಸವೇಶ್ವರ ಆಸ್ಪತ್ರೆ ಹೃದಯ ರೋಗ ತಜ್ಞ ಆರ್.ಎಸ್.ಕಾರ್ತಿಕ್ ಮತ್ತು ಸಿಬ್ಬಂದಿಯು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಆರೋಗ್ಯ ತಪಾಸನೆ ನಡೆಸಿ ಹೃದಯ ರೋಗ ಬರದಂತೆ ತಡೆಯುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಬಸವೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಎಸ್.ಎಲ್. ಪಾಲಾಕ್ಷಪ್ಪ ಹಾಗೂ ಇಂಡಿಯಾನ-ಎಸ್.ಜೆ.ಎಂ. ಸಿಇಓ ರೂಪೇಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಗ್ರಾಮದ ಸುಮಾರು 120ಕ್ಕೂ ಹೆಚ್ಚು ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
