
ಹಿರಿಯೂರು.
ತಾಲೂಕಿನ ಕಣಜನಹಳ್ಳಿ ಗ್ರಾಮದಲ್ಲಿ ಹೊಸೂರಾಂಭ ದೇವಿ, ಬೀರಲಿಂಗೇಶ್ವರ ಸ್ವಾಮಿ, ವೆಂಕಟರಮಣ ಸ್ವಾಮಿ ಗುಡಿ ಕಟ್ಟಿನ ರಾಜಗಿರಿ ಗೋತ್ರದ ಕಂಚಿನ ಭಾಗದ ವಂಶಸ್ಥರ ದೊಡ್ಡ ಜಾತ್ರೆಯ ಅಂಗವಾಗಿ ಸೋಮವಾರ ಹೊಸದುರ್ಗ ಶಾಸಕ ಬಿ.ಜಿ ಗೋವಿಂದಪ್ಪ ಬೆಂಬಲಿಗರೊಂದಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಈ ವೇಳೆಯಲ್ಲಿ ಮಾತನಾಡಿದ ಅವರು, ದೇವರ ಕಾರ್ಯಕ್ರಮ ಮೊದಲಿಂದಲೂ ಗ್ರಾಮೀಣಭಾಗದಲ್ಲಿ ಶ್ರದ್ಧಾಭಕ್ತಿಯಿಂದ, ವಿಜೃಂಭಣೆಯಿಂದ ಆಚರಣೆ ಮಾಡಿಕೊಂಡು ಬಂದಿದ್ದು, ಇಂದಿಗೂ ಸಹ ತಪ್ಪದೇ ಆಚರಿಸಲಾಗುತ್ತದೆ. ಅದೇರೀತಿ ನಿಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವುದರ ಮೂಲಕ ಸಮಾಜಮುಖಿಯಾಗಿ ಮುಂದೆ ಬರಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಬೆಳಿಗ್ಗೆಯಿಂದಲೇ ಜಾತ್ರೆ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕೈಂಕರ್ಯಗಳ ಜೊತೆ ದೇವಸ್ಥಾನದ ಮುಂಭಾಗ ಕಳಸ ಸ್ಥಾಪನೆ, ಮಹಾಗಣಪತಿ ಪೂಜೆ, ಪುಣ್ಯಾಹ, ನಾಂದಿ ಪೂಜೆ, ನವಗ್ರಹ ಆರಾಧನೆ ಜರುಗಿದವು. ಲಿಂಗದ ಬೀರೇಶ್ವರಸ್ವಾಮಿಗೆ ಜಲಾಧಿವಾಸ, ಕ್ಷೀರಾಧಿವಾಸ, ಧಾನ್ಯಾಧಿವಾಸ, ಪುಷ್ಪಾಧಿವಾಸ, ವಸ್ತ್ರಾಧಿವಾಸ, ಬಳಿಕ ಪ್ರಾಣ ಪ್ರತಿಷ್ಠಾಪನೆ ಹೀಗೆ ಕಾರ್ಯಕ್ರಮಗಳು ನಡೆದವು.
ದೇವರುಗಳನ್ನು ಹೊಳೆ ಪೂಜೆ ತೆರಳಿ ದೇವರಿಗೆ ಹೊಸ ವಸ್ತ್ರ, ಆಭರಣ ಬಗೆಬಗೆಯ ಹೂಗಳಿಂದ ಅಲಂಕರಿಸಿ ಜನಪದ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಉತ್ಸವ ನಡೆಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಗೋವಿಂದಪ್ಪ, ಕಂದಿಕೆರೆ ಸುರೇಶ್ ಬಾಬು, ಚೌಳೂರು ಬಸವರಾಜು, ಚಂದ್ರು, ಹರೀಶ್, ರಾಜಣ್ಣ ಸೇರಿದಂತೆ ಗುಡಿ ಗೌಡ ಯಜಮಾನರು, ಪೂಜಾರರು, ದೇವಸ್ಥಾನ ಕಮಿಟಿ ಪದಾಧಿಕಾರಿಗಳು, ಅಣ್ಣತಮ್ಮಂದಿರು, ಕಣಜನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.
