
ಹಿರಿಯೂರು:
ಬಿರುಬಿಸಿಲಲ್ಲಿ ಕೆರೆ-ಕಟ್ಟೆಗಳು ಬರಡಾಗಿದ್ದು, ಪಕ್ಷಿಗಳು ಪ್ರಾಣಿಗಳು ಸಂಕುಲ ಉಳಿಯಬೇಕು ಅನ್ನುವ ನಿಟ್ಟಿನಲ್ಲಿ ಕಾಡಿನ ಪ್ರಾಣಿ-ಪಕ್ಷಿಗಳಿಗೆ ನೀರು ಮತ್ತು ಆಹಾರ ಒದಗಿಸುವ ಉದ್ದೇಶದಿಂದ 56 ಗ್ರಾಮಗಳಲ್ಲಿ ಎಲ್ಲ ಕಡೆ ಪ್ರಾಣಿ, ಪಕ್ಷಿಗಳಿಗೆ, ನೀರು, ಆಹಾರ ಒದಗಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶ್ರೀಮತಿ ಸಾಕಮ್ಮ ಹೇಳಿದರು.
ಆಜಾದ್ ನಗರ ಕಾರ್ಯಕ್ಷೇತ್ರ ಜ್ಯೋತಿ ಶ್ರೀಜ್ಞಾನವಿಕಾಸಕೇಂದ್ರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯೋಜನಾ ಕಚೇರಿಯ ಹಿರಿಯೂರು ವಲಯದ ಕಾಡಿನಹಕ್ಕಿ ಪ್ರಾಣಿಗಳಿಗೆ ಆಹಾರ ಮತ್ತು ನೀರು ಒದಗಿಸುವ ಕಾರ್ಯಕ್ರಮ ಮತ್ತು ಅಜ್ಜಿಯ ಕೈತುತ್ತು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜೊತೆಗೆ ಅಜ್ಜಿಯ ಪ್ರೀತಿಯ ಕೈ ತುತ್ತು ಅಮೃತ ಸಮಾನವಾದ ರುಚಿಯನ್ನು ಹೊಂದಿರುತ್ತದೆ, ಬಾಲ್ಯದ ಮಧುರ ನೆನಪು, ಅಜ್ಜಿ ತೋರುವ ಮಮತೆ, ಕಥೆ ಹೇಳುವ ಶೈಲಿ ಮತ್ತು ಉಣಿಸುವ ಪ್ರೀತಿಯನ್ನು ಸ್ಮರಿಸುತ್ತದೆ. ಅನ್ನದ ಜೊತೆ ಪ್ರೀತಿಯನ್ನು ಬೆರೆಸಿ ಉಣಿಸುವ ಅಜ್ಜಿ ಕೈತುತ್ತಿನ ಬಾಲ್ಯದ ನೆನಪುಗಳನ್ನು ಮರುಕಳಿಸುವ ಪ್ರೀತಿಯ ಕ್ಷಣ ಎಂಬುದಾಗಿ ವಿವರಿಸಿದರು.
ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಕೂಡಿ ಬಾಳುವ ಮನೋಭಾವವನ್ನು ಬೆಳೆಸಬೇಕು, ಆಗ ಮಾತ್ರ ಮಕ್ಕಳಲ್ಲಿ ಉತ್ತಮ ಮಾನವೀಯ ಮೌಲ್ಯಗಳಾದ ಪ್ರೀತಿ, ಸ್ನೇಹ, ಹೊಂದಾಣಿಕೆ, ಸಹಕಾರ, ಸಹಬಾಳ್ವೆಯಂತಹ ಗುಣಗಳನ್ನು ಬೆಳೆಸುವ ಜೊತೆಗೆ ಕೂಡು ಕುಟುಂಬದ ಮಹತ್ವವನ್ನು ತಿಳಿಸಬಹುದಾಗಿದೆ ಎಂದರು. ಈ ಸಭೆಯಲ್ಲಿ ಸೇವಾ ಪ್ರತಿನಿಧಿ ಪುಷ್ಪವತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
