
ಹಿರಿಯೂರು :
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಯಾವುದೇ ಭಯ-ಆತಂಕಗಳಿಲ್ಲದೆ, ಪರೀಕ್ಷೆ ಎದುರಿಸಿ, ಪ್ರಶ್ನೆಗಳನ್ನು ಓದಿಕೊಂಡು ಸರಿಯಾದ ಉತ್ತರ ಬರೆದು, ಉತ್ತಮ ಅಂಕಗಳನ್ನು ಪಡೆಯುವ ಮೂಲಕ ತಾಲ್ಲೂಕಿಗೆ ಕೀರ್ತಿಯನ್ನು ತರಬೇಕು ಎಂಬುದಾಗಿ ತಾಲ್ಲೂಕು ಶಿಕ್ಷಣ ಸುಧಾರಣಾ ಸಮಿತಿ ಅಧ್ಯಕ್ಷರಾದ ಅಮೃತೇಶ್ವರಸ್ವಾಮಿ ಹೇಳಿದರು.
ನಗರದ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳಾದ ಗಿರೀಶ ವಿದ್ಯಾಸಂಸ್ಥೆ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ ಪರೀಕ್ಷೆ ಆರಂಭವಾಗುವ ಮೊದಲು ಭೇಟಿನೀಡಿ, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹೂಗುಚ್ಚ ನೀಡಿ, ಶುಭಕೋರಿ ಅವರು ಮಾತನಾಡಿದರು.

ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ ಮಾತನಾಡಿ, ಪ್ರಾರಂಭದಿಂದಲೂ ಹೆಚ್ಚಿನ ಶ್ರಮವಹಿಸಿ, ಪರೀಕ್ಷಾ ಸಿದ್ಧತೆ ನಡೆಸಿರುವ ವಿದ್ಯಾರ್ಥಿಗಳು ಜಾಗೃತಿಯಿಂದ ಪರೀಕ್ಷೆ ಬರೆಯಬೇಕು, ಕಳೆದ ಬಾರಿ ಹಿರಿಯೂರು ತಾಲ್ಲೂಕಿನ ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರು,
ಈ ಬಾರಿಯೂ ವಿದ್ಯಾರ್ಥಿಗಳು ಉತ್ತಮವಾಗಿ ಪರೀಕ್ಷೆ ಬರೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆಯಲು ಪ್ರಯತ್ನಿಸಬೇಕು, ಸಾಧ್ಯವಾಗದಿದ್ದರೆ ತಾಲ್ಲೂಕಿಗೆ ಅಥವಾ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆಯಬೇಕು, ಹೆತ್ತ ತಂದೆ-ತಾಯಿಗಳಿಗೆ ಹಾಗೂ ಓದಿದ ಶಾಲೆಗೆ ಕೀರ್ತಿಯನ್ನು ತರಬೇಕು ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸುಧಾರಣಾ ಸಮಿತಿ ನಾಮನಿರ್ದೇಶಿತ ಸದಸ್ಯ ನಯೀಮುದ್ದೀನ್, ಸಮನ್ವಯಾಧಿಕಾರಿ ಆರ್.ಟಿ.ಎಸ್.ಶ್ರೀನಿವಾಸ್, ಬಿ.ಆರ್.ಪಿ.ಪ್ರಸನ್ನಕುಮಾರ್, ಸಿ.ಆರ್.ಪಿ.ಚರಣ್ ರಾಜ್ ಇತರರು ಉಪಸ್ಥಿತರಿದ್ದರು.
