
ಹಿರಿಯೂರು:
ಚಿತ್ರದುರ್ಗ ಜಿಲ್ಲೆ, ಸತತ ಬರಗಾಲಕ್ಕೆ ತುತ್ತಾಗಿ ಜನ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ರೈತರಿಗೆ ವ್ಯವಸಾಯ ಉದ್ದೇಶದಿಂದ ಹಿರಿಯೂರು ಹಾಗೂ ಹೊಸದುರ್ಗ ಗಡಿ ಭಾಗದಲ್ಲಿ ಜಲಾಶಯ ನಿರ್ಮಿಸಿ, ಇಡೀ ಜಿಲ್ಲೆಯ ಜನಸಾಮಾನ್ಯರಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ರೈತರ ಕೃಷಿ ಉದ್ದೇಶಕ್ಕಾಗಿ ಅಣೆಕಟ್ಟು ಕಟ್ಟಿದ ರೂವಾರಿಗಳು ಆದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಮಾಡಿರುವ ಕೆಲಸ ಸಾವಿರಾರು ವರುಷ ಕಳೆದರೂ ಮರೆಯಲಾರದಂತ ಕೆಲಸವಾಗಿದೆ ಎಂಬುದಾಗಿ ರೈತ ಮುಖಂಡರಾದ ಕೆ.ಟಿ.ತಿಪ್ಪೇಸ್ವಾಮಿ ಅವರು ಹೇಳಿದರು.
ಇಂದು ವಾಣಿವಿಲಾಸ ಜಲಾಶಯ ಇಲ್ಲದೆ ಇದ್ದಿದ್ದರೆ ಇಡೀ ಚಿತ್ರದುರ್ಗ ಜಿಲ್ಲೆಯೇ ಅನುಶಿಸಿ ಹೋಗುವಂತ ಆಗುತ್ತಿತ್ತು. ಇಂದು ಅವರು ಕಟ್ಟಿಸಿದ ಅಣೆಕಟ್ಟು 89 ವರ್ಷಗಳ ಬಳಿಕ ಕೋಡಿ ಬಿದ್ದಿದ್ದು ಈಗ ಮೂರನೇ ಬಾರಿಗೆ ಕೋಡಿ ಹರಿಯುವ ಮುನ್ಸೂಚನೆ ಕಾಣುತ್ತಿವೆ.

ಆದ್ದರಿಂದ ಇಂಥ ಮಹನಾಯಕರನ್ನು ದಿನನಿತ್ಯ ನೆನಪು ಮಾಡಿಕೊಳ್ಳುವ ಮತ್ತು ಇಂಥವರ ಜೀವನ ಚರಿತ್ರೆಯನ್ನು ಯುವಪೀಳಿಗೆಗೆ ಮಾರ್ಗದರ್ಶಕ ಆಗುವ ಉದ್ದೇಶದಿಂದ ಹಿರಿಯೂರಿನ ಮಧ್ಯಭಾಗದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ48ಕ್ಕೆ ಹೊಂದಿಕೊಂಡಂತೆ ವಾಣಿವಿಲಾಸ ಜಲಾಶಯಕ್ಕೆ ಹೋಗುವ ರಸ್ತೆ ಅಗಲೀಕರಣ ಮಾಡುವ ಮೂಲಕ ಡಬಲ್ ರಸ್ತೆ ನಿರ್ಮಿಸುವ ಮೂಲಕ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಬೇಕು ಎಂಬುದು ಅವರು ಒತ್ತಾಯಿಸಿದರು.
ಅಷ್ಟೇ ಅಲ್ಲದೆ, ಫ್ಯಾಕ್ಟರಿ ಸರ್ಕಲ್ ನಲ್ಲಿ ಒಂದು ಸುಂದರ ವೃತ್ತ ನಿರ್ಮಿಸುವ ಮೂಲಕ ಆ ವೃತ್ತದ ಮಧ್ಯದಲ್ಲಿ ಒಡೆಯರ್ ರವರ ಪುತ್ಥಳಿಯನ್ನು ಸ್ಥಾಪಿಸಬೇಕಾದ ಅತ್ಯವಶ್ಯಕತೆ ಇದೆ. ಇದು ಇಡೀ ಜಿಲ್ಲೆಯ ಹಾಗೂ ತಾಲ್ಲೂಕಿನ ಜನರ ಕನಸು ಕೂಡ ಆಗಿದ್ದು, ಜಿಲ್ಲಾ ಸಚಿವರು ಈ ಬಗ್ಗೆ ಕೂಡಲೇ ಗಮನಹರಿಸುವ ಮೂಲಕ ತಾಲ್ಲೂಕಿನ ಜನರ ಕನಸು ನನಸು ಮಾಡಬೇಕು.
ಆದ್ದರಿಂದ ನಗರಸಭೆ ಆಡಳಿತ ತುರ್ತಾಗಿ ಈ ಕೆಲಸವನ್ನು ಕೈಗೆತ್ತಿಕೊಂಡು ಸಮಸ್ತ ನಾಗರಿಕರಿಗೆ ಪ್ರೀತಿ ಪಾತ್ರರಾಗಬೇಕು ಎಂಬುದಾಗಿ ಅವರು ಆಗ್ರಹಿಸದರಲ್ಲದೆ, ಈ ಮೂಲಕ ರೈತ ಸಂಘಟನೆ ಹಾಗೂ ಪ್ರಗತಿಪರ ಸಂಘಟನೆಗಳ ಮೂಲಕ ನಗರಸಭೆ ಅಧ್ಯಕ್ಷರಾದ ಬಾಲಕೃಷ್ಣರವರಿಗೆ ಈ ಮನವಿ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿ ಮಾತನಾಡಿದ ನಗರಸಭೆ ಅಧ್ಯಕ್ಷರಾದ ಬಾಲಕೃಷ್ಣ ಅವರು ಈಗಾಗಲೇ ನಮ್ಮ ಸಚಿವರು ಶಾಸಕರು ಪತ್ರ ಕೊಟ್ಟು ಸೂಚನೆ ನೀಡಿದ್ದಾರೆ. ಆದ್ದರಿಂದ ಮೊನ್ನೆ ನಡೆದ ನಗರಸಭೆ ಸದಸ್ಯರ ಸಭೆಯಲ್ಲಿ ಅನುಮೋದನೆಗೊಂಡಿದೆ. ಆದಷ್ಟು ಬೇಗ ಈ ಕಾರ್ಯವನ್ನು ಕಾರ್ಯಗತಗೊಳಿಸುತ್ತೇವೆ ಎಂಬುದಾಗಿ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ನಗರಸಭೆ ಉಪಾಧ್ಯಕ್ಷೆ ಶ್ರೀಮತಿ ಮಂಜುಳಾ, ನಗರಸಭೆ ಮಾಜಿ ಅಧ್ಯಕ್ಷೆ ಹಾಗೂ ಹಾಲಿಸದಸ್ಯೆ ಶ್ರೀಮತಿ ಶಿವರಂಜಿನಿಯಾದವ್, ರೈತ ಮುಖಂಡರುಗಳಾದ ಕೆ.ಟಿ.ತಿಪ್ಪೇಸ್ವಾಮಿ, ಆಲೂರುಸಿದ್ದರಾಮಣ್ಣ, ಈರಣ್ಣ, ವೆಂಕಟೇಶ್, ತಿಮ್ಮಯ್ಯ ಸೇರಿದಂತೆ ಅನೇಕ ರೈತಮುಖಂಡರುಗಳು ಉಪಸ್ಥಿತರಿದ್ದರು.

