
ಹಿರಿಯೂರು:
ಇಂದಿನ ಆಧುನಿಕ ಜಗತ್ತಿನಲ್ಲಿ ಸಮೂಹ ಮಾಧ್ಯಮಗಳ ಹಾವಳಿಯಿಂದ ಜಾನಪದ ಕಲೆಗಳು ಅಲಿವಿನ ಅಂಚಿನಲ್ಲಿದ್ದು, ಅಳಿವಿನ ಅಂಚಿನಲ್ಲಿರುವ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವಂತಹ ಕೆಲಸವನ್ನು ಇಂದಿನ ಯುವಜನತೆ ಮಾಡಬೇಕು ಎಂಬುದಾಗಿ ಶ್ರೀಶನೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀರಾಮಪ್ಪಸ್ವಾಮಿ ಅವರು ಹೇಳಿದರು.
ತಾಲ್ಲೂಕಿನ ಬ್ಯಾರಮಾಡು ಗ್ರಾಮದ ಶ್ರೀಶನೇಶ್ವರ ದೇವಸ್ಥಾನದ ಆವರಣದಲ್ಲಿ ಅಮೃತವರ್ಷಿಣಿ ಕಲಾಸಂಘ( ರಿ) ಹೊಸದುರ್ಗ ಶ್ರೀ ಶನೇಶ್ವರ ಸಾಂಸ್ಕೃತಿಕ ಕಲಾ ಸಂಘ ಬ್ಯಾರಮಡು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶನಿದೇವರ ಪಾರಾಯಣ ಹಾಗೂ ಜನಪದಗೀತೆ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಇಂದಿಗೂ ಸೋಬಾನೆ ಬೀಸುವ ಕಲ್ಲಿನ ಪದ ಭಜನೆ ಚೌಡ್ಕಿ ಪದಗಳನ್ನು ದಸರಾ, ದೀಪಾವಳಿ, ಶಿವರಾತ್ರಿ ಶ್ರೀರಾಮನವಮಿ ಹಲವಾರು ಹಬ್ಬಗಳಲ್ಲಿ ಕಲಾಪ್ರದರ್ಶನಗಳು ನಡೆಯುತ್ತವೆ. ಇಂತಹ ಕಲೆ ಹಾಗೂ ಕಲಾವಿರನ್ನ ಗುರುತಿಸಿ ಗೌರವಿಸುವ ಕೆಲಸವಾಗಬೇಕು ಎಂಬುದಾಗಿ ಅವರು ಹೇಳಿದರು.
ಇದೇ ವೇಳೆ ಬಹುಮುಖಿ ಕಲಾ ಕೇಂದ್ರದಿಂದ ಜಾನಪದ ಗೀತೆ ಗಾಯನ, ರಾಘವೇಂದ್ರ ಕಲಾ ಸಂಘದಿಂದ ಸುಗಮ ಸಂಗೀತವನ್ನು ಕಲಾವಿದರು ಪ್ರಸ್ತುತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಓ.ರಮೇಶ್, ಕರಿಯಪ್ಪ ಎಲ್ಲದಕೆರೆ, ಈಶ್ವರಪ್ಪ, ಜಯಪ್ಪ ಬಡ ಗೊಲ್ಲರಹಟ್ಟಿ, ಕಲಾವಿದರಾದ ಪುರುಷೋತ್ತಮ್, ವೆಂಕಟೇಶ್, ಶಶಿಕುಮಾರ್, ಕಾಂತರಾಜ್ ಹಂದಿಗನಾಡು, ರಂಗಸ್ವಾಮಿ, ಮಾಳಮ್ಮ, ಅಮೃತವರ್ಷಿಣಿ ಕಲಾಸಂಘದ ಕಾರ್ಯದರ್ಶಿ ಓಮೂರ್ತಿ, ಬಹುಮುಖಿ ಕಲಾ ಕೇಂದ್ರದ ಸಂಚಾಲಕ ಟಿ.ಮಧು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

