
ಹಿರಿಯೂರು:
ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಪಾಲಿಸಬೇಕು. ರಸ್ತೆಯಲ್ಲಿ ನಿಧಾನವಾಗಿ, ಜಾಗರೂಕತೆಯಿಂದ ಮತ್ತು ಸಂಚಾರ ನಿಯಮಗಳನ್ನು ಪಾಲಿಸಿಕೊಂಡು ಚಾಲನೆ ಮಾಡಬೇಕು ಎಂಬುದಾಗಿ ಹಿರಿಯ ಸಿವಿಲ್ ನ್ಯಾಯಧೀಶರು ಜೆ.ಎಂ.ಎಫ್.ಸಿ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಸುಜಾತ ಸುವರ್ಣ ಬಿ.ಅವರು ಹೇಳಿದರು.
ನಗರದ ಮೋಕ್ಷಗೊಂಡಮ್ ವಿಶ್ವೇಶ್ವರಯ್ಯ ವಿದ್ಯಾಮಂದಿರದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ, ಶ್ರೀ ಮೋಕ್ಷಗುಂಡಮ್ ವಿಶ್ವೇಶ್ವರಯ್ಯ ಶಾಲೆ ಇವರ ಸಂಯುಕ್ತಾಶ್ರಯದಲ್ಲಿ ರಸ್ತೆ ಸುರಕ್ಷತೆ ಮಾಸಾಚಾರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿಗ್ನಲ್ ಗಳು, ರಸ್ತೆ ಗುರುತುಗಳು ಮತ್ತು ವೇಗ ಮಿತಿಯನ್ನು ಗಮನಿಸಬೇಕು ಹಾಗೂ ಪಾದಾಚಾರಿಗಳು ಮತ್ತು ಇತರ ವಾಹನಗಳಿಗೆ ತೊಂದರೆ ಆಗದಂತೆ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು.
ಆದರೆ, ನಿಯಮಗಳನ್ನು ಪಾಲಿಸದೆ ಅಜಾಗರೂಕವಾಗಿ ಚಾಲನೆ ಮಾಡಿದರೆ ಅಪಘಾತಗಳು ಸಂಭವಿಸಿ ಗಾಯಗಳು ಅಥವಾ ಜೀವಹಾನಿ ಆಗಬಹುದು. ವಾಹನಗಳಿಗೆ ಹಾನಿಯಾಗುತ್ತದೆ. ದಂಡ ಹಾಗೂ ಕಾನೂನು ಸಮಸ್ಯೆಗಳು ಎದುರಾಗುತ್ತವೆ. ಎಂದರಲ್ಲದೆ,
ವಿದ್ಯಾರ್ಥಿಗಳು ಕಾನೂನುಬದ್ಧ ವಯಸ್ಸು ತಲುಪಿದ ನಂತರವೇ ವಾಹನ ಚಾಲನೆ ಮಾಡಬೇಕು. ಸಾಮಾನ್ಯವಾಗಿ 16ವರ್ಷ ತುಂಬಿದವರು ಗೇರ್ ಇಲ್ಲದ ದ್ವಿಚಕ್ರ ವಾಹನವನ್ನು ಮತ್ತು 18 ವರ್ಷ ತುಂಬಿದವರು ಎಲ್ಲಾ ವಾಹನಗಳನ್ನು ಚಾಲನೆ ಮಾಡಬಹುದು.

ಈ ವಯಸ್ಸು ತಲುಪಿದ ನಂತರ ಪ್ರಾದೇಶಿಕ ಸಾರಿಗೆ ಆರ್.ಟಿ.ಓ. ಮೂಲಕ ಮೊದಲು ಲರ್ನರ್ ಲೈಸೆನ್ಸ್ ಪಡೆದು ಚಾಲನಾ ಪರೀಕ್ಷೆ ಉತ್ತೀರ್ಣರಾದ ಮೇಲೆ ಶಾಶ್ವತ ಚಾಲನಾ ಪರವಾನಗಿ ನೀಡಲಾಗುತ್ತದೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ರಸ್ತೆ ಸುರಕ್ಷತೆ ಬಗ್ಗೆ ತಿಳಿದುಕೊಂಡಿರಬೇಕು ಎಂಬುದಾಗಿ ಅವರು ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಹೆಚ್.ಡಿ. ಶ್ರೀಧರ್ ಅವರು ಮಾತನಾಡಿ ರಸ್ತೆ ಸುರಕ್ಷತೆ ಪ್ರತಿಯೊಬ್ಬರ ಜೀವನಕ್ಕೆ ಬಹಳ ಮುಖ್ಯ ರಸ್ತೆ ಅಪಘಾತಗಳು ಅಜಾಗರೂಕ ಚಾಲನೆ, ಅತಿವೇಗ, ಸಂಚಾರ ನಿಯಮಗಳ ಉಲ್ಲಂಘನೆ ಮತ್ತು ಗಮನ ತಪ್ಪುವುದರಿಂದ ಸಂಭವಿಸುತ್ತವೆ ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಂ.ಬಸವರಾಜಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಯದರ್ಶಿ ಹೆಚ್.ಎಂ.ಬಸವರಾಜ್, ನಿರ್ದೇಶಕರಾದ ಕೆ.ಆರ್.ವೀರಭದ್ರಯ್ಯ, ಅಧಿಕಾರಿಗಳಾದ ಚಿತ್ರದುರ್ಗ ಭರತ್ ಎಂ.ಕಾಳೆಸಿಂಗೆ, ಹಿರಿಯ ಮೋಟಾರ್ ವಾಹನ ನಿರೀಕ್ಷಕರಾದ ಮಹಂತೇಶ್, ವಕೀಲರ ಸಂಘದ ಅಧ್ಯಕ್ಷರಾದ ಎಂ.ಆರ್.ರಂಗಸ್ವಾಮಿ, ಸಹಾಯಕ ಕಾನೂನು ನೆರವು ಅಭಿರಕ್ಷಕ ಕೆ.ಆರ್.ಸೋಮ, ವಕೀಲರ ಸಂಘದ ಉಪಾಧ್ಯಕ್ಷೆ ಎಂ.ಕಲಾವತಿ, ವಕೀಲರ ಸಂಘ ಜಂಟಿ ಕಾರ್ಯದರ್ಶಿ ಹೆಚ್.ವಿ.ಅಜಯ್, ಎಸ್.ಶೇಷಾದ್ರಿ, ಮುಖ್ಯ ಶಿಕ್ಷಕರಾದ ಜಿ.ತಿಪ್ಪೇಸ್ವಾಮಿ, ಶಿಕ್ಷಕಿ ಪದ್ಮಜಾ, ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

