
ಹಿರಿಯೂರು:
ನಗರದಲ್ಲಿ ಪ್ರತಿ ತಿಂಗಳು 2ನೇ ಬುಧವಾರದಲ್ಲಿ ಸಾರ್ವಜನಿಕರ ಅನುಕ್ಕೂಲಕ್ಕಾಗಿ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸೆ ಶಿಬಿರವನ್ನು ನಡೆಸಲಾಗುತ್ತಿದ್ದು, ಪ್ರತಿಯೊಬ್ಬರೂ ನೇತ್ರ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ನೇತ್ರ ವೈದ್ಯರಿಂದ ತಪಾಸಣೆ ಸಲಹೆ ಪಡೆದುಕೊಂಡು ಪ್ರತಿಯೊಬ್ಬರೂಆರೋಗ್ಯ ಜೀವನ ನಡೆಸಬೇಕು ಎಂಬುದಾಗಿ ರೆಡ್ ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ ಅವರು ಹೇಳಿದರು.
ನಗರದ ರೋಟರಿ ಸಭಾಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೋಟರಿಸಂಸ್ಥೆ, ಸರ್ವೋದಯಾ, ಥಿಯೋಸಫಿಕಲ್ ಸೊಸೈಟಿ ಹಿರಿಯೂರು, ಲಯನ್ಸ್ ಕಣ್ಣಿನ ಆಸ್ಪತ್ರೆ ಬೆಂಗಳೂರು, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಚಿತ್ರದುರ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಉಚಿತ ಮಸೂರ ಅಳವಡಿಕೆ ಶಿಬಿರವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಶಿಬಿರದಲ್ಲಿ ನೇತ್ರ ತಪಾಸಣೆ ಹಾಗೂ ನೇತ್ರಚಿಕಿತ್ಸೆ ಸೌಲಭ್ಯವನ್ನು ಪಡೆದುಕೊಂಡವರು ನಿಮ್ಮ ನೆರೆಹೊರೆಯವರಿಗೂ ತಿಳಿಸುವ ಮೂಲಕ ನೇತ್ರ ಸಮಸ್ಯೆಗೆ ಸೂಕ್ತ ಪರಿಹಾರ ಪಡೆಯಲು ಮಾರ್ಗದರ್ಶನ ನೀಡಬೇಕು, ಉಚಿತ ಕಣ್ಣಿನ ತಪಾಸಣೆ ಮತ್ತು ಉಚಿತ ಮಸೂರ ಅಳವಡಿಕೆ ಶಿಬಿರದ ಸೌಲಭ್ಯ ಎಲ್ಲರಿಗೂ ಸಿಗುವಂತಾಗಬೇಕು ಎಂಬುದಾಗಿ ಹೇಳಿದರು.

ಯುತ್ ರೆಡ್ ಕ್ರಾಸ್ ಅಧ್ಯಕ್ಷರಾದ ಶ್ರೀಮತಿ ಶಶಿಕಲಾರವಿಶಂಕರ್ ಮಾತನಾಡಿ, ಜನಪರಕಾಳಜಿ ಇರುವ ರೆಡ್ ಕ್ರಾಸ್ ಹಾಗೂ ರೋಟರಿ ಸಂಸ್ಥೆಗಳು ದಾನಿಗಳ ಸಹಕಾರದಲ್ಲಿ ಆರೋಗ್ಯವಂತ ಸಮಾಜಕ್ಕೆ ಹೆಚ್ಚುಹೆಚ್ಚು ಸೇವಾ ಶಿಬಿರಗಳನ್ನು ನಡೆಸುತ್ತಾ ಬಂದಿದ್ದು,ಬೆಂಗಳೂರು ಲಯನ್ಸ್ ಕಣ್ಣಿನ ಆಸ್ಪತ್ರೆಯಿಂದ ಕಣ್ಣಿನ ಚಿಕಿತ್ಸೆ ಪಡೆದಿರುವ ಪ್ರತಿಯೊಬ್ಬರಿಗೂ ಕಣ್ಣಿನ ದೃಷ್ಠಿ ದೊರೆತಿದೆ ಎಂದರಲ್ಲದೆ,
ಸಾರ್ವಜನಿಕರ ಅನುಕೂಲಕ್ಕಾಗಿಯೇ ಈ ಉಚಿತ ಕಣ್ಣಿನ ತಪಾಸಣೆ ಮತ್ತು ಉಚಿತ ಮಸೂರ ಅಳವಡಿಕೆ ಶಿಬಿರವನ್ನು ನಡೆಸಲಾಗುತ್ತಿದ್ದು, ಪ್ರತಿಯೊಬ್ಬರೂ ಸಹ ಸರಿಯಾದ ಸಮಯಕ್ಕೆ ನೇತ್ರ ತಪಾಸಣೆ ಮಾಡಿಸಿಕೊಂಡು ಆರೋಗ್ಯವಂತರಾಗುವ ಮೂಲಕ ಉತ್ತಮ ಜೀವನ ನಡೆಸಬೇಕು ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಲಯನ್ಸ್ ಕಣ್ಣಿನ ಆಸ್ಪತ್ರೆ, ನೇತ್ರ ವೈದ್ಯರಾದ ಅರ್ಚಿತಾಸಂಜಯ್ ಮತ್ತು ಉಜಿನಪ್ಪ, ರೆಡ್ ಕ್ರಾಸ್ ಖಜಾಂಚಿ ಸಣ್ಣಭೀಮಣ್ಣ, ಪಿ.ಆರ್.ಸತೀಶ್ ಬಾಬು, ಹೆಚ್.ಡಿ.ವಸಂತ್ ಕುಮಾರ್, ನಾಗಸುಂದರಮ್ಮ, ಸುಬ್ಬಣ್ಣಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

