
ಹಿರಿಯೂರು:
ತಾಲ್ಲೂಕಿನ ಮೇಟಿಕುರ್ಕೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮಂಜೂರಾಗಿದ್ದ 108 ಆಶ್ರಯ ನಿವೇಶನಗಳ ಫಲಾನುಭವಿಗಳಿಗೆ ಜಾಗ ಗುರುತಿಸಿ ಕೊಟ್ಟು ಇ-ಸ್ವತ್ತು ಮಾಡಿಕೊಡಿ ಎಂಬುದಾಗಿ ಸಂತ್ರಸ್ತರು ತಹಶೀಲ್ದಾರ್ ಕಚೇರಿ ಬಳಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿ ಒತ್ತಾಯಿಸಿದರು.
ನಾವು ಕಳೆದ ಮೂರು ದಶಕಗಳಿಂದ ಕೇಳುತ್ತಲೆ ಇದ್ದೇವೆ. ಆದರೆ ಇತ್ತ ಗ್ರಾಮಪಂಚಾಯ್ತಿಯಲ್ಲಿ ನಿವೇಶನ ಮಂಜೂರಿಗೆ ಸಂಬಂಧಪಟ್ಟ ದಾಖಲೆಗಳೇ ಇಲ್ಲ. ನಿವೇಶನ ಮಂಜೂರಾದ ಫಲಾನುಭವಿಗಳು ದಿಕ್ಕು ತೋಚದಂತಾಗಿದೆ.

ಈ ಸಮಸ್ಯೆಗೆ ಈಗ 34 ವರ್ಷವಾಯಿತು. ಒಂದು ಸಮಸ್ಯೆಯನ್ನು ದಶಕಗಳ ಕಾಲ ಸಮಸ್ಯೆಯನ್ನಾಗಿಯೇ ಉಳಿಸಿಕೊಂಡ ವ್ಯವಸ್ಥೆಯ ಬಗ್ಗೆ ಬೇಸರಗೊಂಡು ಒಂದಾದ ಮೇಲೊಂದು ಪ್ರತಿಭಟನೆ ಮಾಡುತ್ತಲೇ ಇದ್ದಾರೆ.
ನಿರಾಶ್ರಿತರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಆಗಿನ ಮುಖ್ಯಮಂತ್ರಿ ಬಂಗಾರಪ್ಪನವರ ಆಶ್ರಯ ಯೋಜನೆಯಡಿ ಅಂದಿನ ಸೂರಗೊಂಡನಹಳ್ಳಿ ಗ್ರಾಮಪಂಚಾಯಿತಿ ಮತ್ತು ಇಂದಿನ ಮೇಟಿಕುರ್ಕೆ ಗ್ರಾಮಪಂಚಾಯಿತಿ ವ್ಯಾಪ್ತಿಯ ರಿ.ಸ.ನಂ.41ರಲ್ಲಿ ನಿರಾಶ್ರಿತರಿಗೆ 1991ರಲ್ಲಿ 108 ನಿವೇಶನ ಮಂಜೂರು ಆಗಿದ್ದವು.

ಆಗ ಜಾಗ ಗುರುತಿಸಿ ಕೊಟ್ಟು ಹದ್ದು ಬಸ್ತು ಮಾಡದೇ, ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳದೇ ಇರುವುದರ ಪರಿಣಾಮ ಇಂದು ಯಾರ ಜಾಗ ಎಲ್ಲಿದೆ ಎಂಬ ಮಾಹಿತಿಯೇ ಇಲ್ಲದಂತಾಗಿದೆ.
ಇ-ಸ್ವತ್ತಿಗೆ ಅರ್ಜಿ ಬಂದ ತಕ್ಷಣ ಸನಂ.41ರಲ್ಲಿ ನೀಡಿರುವ ಹಕ್ಕುಪತ್ರಗಳ ಫಲಾನುಭವಿ ಪಟ್ಟಿ, ನಕಾಶೆ, ಪಹಣಿ ದಾಖಲಾತಿಗಳನ್ನು ನೀಡಿ ಎಂದು ಪಂಚಾಯ್ತಿಯವರು ಸಂಬಂಧಪಟ್ಟ ಮೆಲಿನ ಇಲಾಖೆಗೆ ಮನವಿ ಸಲ್ಲಿಸುತ್ತಲೇ ಬಂದಿದ್ದರು ಸಹ ಫಲಿತಾಂಶ ಶೂನ್ಯವಾಗಿದೆ.
ಜಾಗ ಸಿಗದೇ ಕೆಲವು ಹಕ್ಕುಪತ್ರದ ಆಧಾರದ ಮೇಲೆ ಕೆಲವರು ಶೆಡ್ ನಿರ್ಮಿಸಿಕೊಂಡಿದ್ದು, ಉಳಿದವರ ಪರದಾಟ ತಪ್ಪಿಲ್ಲ. ಕೆಲವರು ನಿವೇಶನ ಸಂಖ್ಯೆ ಹೊಂದಿದ್ದು, ಕ್ರಮವಾಗಿ ಕಂದಾಯ ಕಟ್ಟಿಕೊಂಡು ಬರುತ್ತಿದ್ದರೂ ಸಹ ಅವರಿಗೆ ಅವರ ನಿವೇಶನ ಗುರುತಿಸಿಕೊಳ್ಳಲಾಗುತ್ತಿಲ್ಲ.
ನಿವೇಶನ ಗುರುತಿಗೆ ಹಾಕಿದ್ದ ಕಲ್ಲುಗಳು ಕಾಣೆಯಾಗಿದ್ದು, ಸೈಟು ಹುಡುಕಲಾಗುತ್ತಿಲ್ಲ. ನಿವೇಶನ ಗುರುತಿಗೆ ಹಾಕಿದ್ದ ಕಲ್ಲುಗಳು ಕಾಣೆಯಾಗಿದ್ದು, ಸೈಟು ಹುಡುಕಲಾಗುತ್ತಿಲ್ಲ.ಇದೀಗ ಪಂಚಾಯ್ತಿ ಬಳಿ ನಿವೇಶನ ಮಂಜೂರಾದವರ ಪಟ್ಟಿಯೇ ಇಲ್ಲ.
108 ನಿವೇಶನಗಳಿಗೆ 135ಕ್ಕೂ ಹೆಚ್ಚು ಖಾತೆಗಳಿವೆ ಎನ್ನಲಾಗುತ್ತಿದ್ದು, ಒಂದೊಂದು ನಿವೇಶನಕ್ಕೆ 2-3 ಹಕ್ಕುಪತ್ರಗಳು ಸೃಷ್ಠಿಯಾಗಿ ಗೊಂದಲ ಉಂಟಾಗಿದೆ.ಕೆಲವು ದಾಖಲಾತಿ ಓವರ್ ರೈಟಿಂಗ್ ಆಗಿದ್ದು, ತಿದ್ದಲ್ಪಟ್ಟು ದಾಖಲಾತಿಯ ಹೋಲಿಕೆಯೇ ಕಷ್ಟ ಎಂದು ಈ ಹಿಂದಿನ ಪಿ.ಡಿ.ಓ.ಒಬ್ಬರು ತಮ್ಮ ಅಸಹಾಯಕತೆ ಹೊರ ಹಾಕಿದ್ದರು.
ಇದೀಗ ಇಡೀ ಎಲ್ಲಾ ನಿವೇಶನಗಳನ್ನು ರದ್ದು ಮಾಡಿ ನೈಜ ಫಲಾನುಭವಿಗಳಿಗೆ ಹಂಚಲು ಪಂಚಾಯ್ತಿಯಿಂದ ಸಿ.ಎಸ್.ಆಫೀಸ್ ಗೆ ಅಲ್ಲಿಂದ ಡಿ.ಸಿ.ಕಚೇರಿಗೆ, ಡಿ.ಸಿ. ಕಚೇರಿಯಿಂದ ಎ.ಸಿ.ಕಚೇರಿಗೆ, ಅಲ್ಲಿಂದ ತಹಶೀಲ್ದಾರ್ ಗೆ ದಾಖಲಾತಿಗಳು ಹರಿದಾಡುತ್ತಿವೆ.1991ರಲ್ಲಿ ನಿವೇಶನ ಪಡೆದು ನಿರಂತರವಾಗಿ ಕಂದಾಯ ಕಟ್ಟಿಕೊಂಡು ಬಂದಿರುವ ನೈಜ ಫಲಾನುಭವಿಗಳಿಗೆ ನಿವೇಶನ ಸಿಗಲು ಅಧಿಕಾರಿ ವರ್ಗ ಪ್ರಯತ್ನಿಸಬೇಕು.
“ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಮತ್ತು ಅರಣ್ಯ ಹಕ್ಕು ಸಮಿತಿಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಜಯಣ್ಣ ಪ್ರತಿಕ್ರಿಯೆ ನೀಡಿ ಫಲಾನುಭವಿಗಳು ಅನುಭೋಗದಲ್ಲಿಲ್ಲ ಎನ್ನುತ್ತಿದ್ದಾರೆ.
ಆದರೆ ಒಂದೇ ನಿವೇಶನಕ್ಕೆ ಎರಡು-ಮೂರು ಹಕ್ಕುಪತ್ರ ನೀಡಿದರೆ ಅವರಲ್ಲಿ ಯಾರು ಅನುಭೋಗದಲ್ಲಿರಬೇಕು.ಹಕ್ಕು ಪಡೆದುಕೊಂಡು ಕಂದಾಯ ಕಟ್ಟಿಕೊಂಡು ಇ-ಸ್ವತ್ತು ಮಾಡಿಸಿಕೊಳ್ಳಲು ಸ್ವಾತಂತ್ರ್ಯ ಇಲ್ಲದಂತಾಗಿದೆ .
ನಿವೇಶನ ರದ್ದು ಮಾಡುವುದೇ ಮುಖ್ಯವಲ್ಲ. ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂಬುದಾಗಿ ಪ್ರತಿಭಟನಾಕಾರರು ತಹಶೀಲ್ದಾರ್ ಅವರಲ್ಲಿ ಮನವಿ ಮಾಡಿದ್ದಾರೆ.
