
ಹಿರಿಯೂರು:
ತಾಲ್ಲೂಕಿನ ಹಾಗೂ ಜಿಲ್ಲೆಯ ಅಕ್ಷಯ ಪಾತ್ರೆಯಾಗಿರುವ ವಾಣಿವಿಲಾಸಸಾಗರ ಪ್ರಕೃತಿಯಿಂದ ಹಾಗೂ ಜಿಲ್ಲಾ ಸಚಿವರಾದ ಡಿ.ಸುಧಾಕರ್ ರವರ ಪ್ರಯತ್ನದಿಂದಲೂ ಸಹ ವಾಣಿವಿಲಾಸಸಾಗರ ಕೋಡಿ ಬಿದ್ದಿರುವುದು ಜಿಲ್ಲೆಯ ಹಾಗೂ ತಾಲ್ಲೂಕಿನ ಜನತೆಗೆ ಅತೀವ ಸಂತೋಷವಾಗಿರುತ್ತದೆ ಎಂಬುದಾಗಿ ತಾಲ್ಲೂಕು ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷರಾದ ಆಲೂರುಸಿದ್ಧರಾಮಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.
ನೀರು ಇಲ್ಲದಿರುವಾಗ ನೀರಿಲ್ಲವೆಂದು ಗೋಳಾಡುತ್ತೇವೆ. ಈ ಹಿಂದೆ ಹಿರಿಯೂರು ತಾಲ್ಲೂಕಿನ ಐಮಂಗಳ ಹೋಬಳಿಯ ಕೆರೆಗಳಿಗೆ ಹಾಗೂ ಜವಗೊಂಡನಹಳ್ಳಿ ಗಾಯತ್ರಿ ಕೆರೆ ಹಾಗೂ ಆ ಭಾಗದ ಕೆರೆಗಳಿಗೆ ವಾಣಿವಿಲಾಸ ಸಾಗರದ ನೀರನ್ನು ತುಂಬಿಸಲು 256 ದಿನ ಧರಣಿ ಸತ್ಯಾಗ್ರಹ ಹಮ್ಮಿಕೊಂಡು ಉಪವಾಸ ಸತ್ಯಾಗ್ರಹಕ್ಕೆ ಕಾಲಿಟ್ಟಾಗ ಜಿಲ್ಲಾ ಸಚಿವರಾದ ಡಿ.ಸುಧಾಕರ್ ರವರು ಬಂದು ನಿಮ್ಮ ಭರವಸೆಯಂತೆ ಸರ್ಕಾರದೊಂದಿಗೆ ಮಾತನಾಡಿ ನಿಮ್ಮ ಬೇಡಿಕೆಯನ್ನು ಈಡೇರಿಸುವ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದ್ದರಿಂದ ಉಪವಾಸ ಸತ್ಯಾಗ್ರಹ ಕೊನೆಗೊಂಡಿತು.
ಈಗ ವಾಣಿವಿಲಾಸ ಸಾಗರ ಸಾಗರ ಕೋಡಿ ಬಿದ್ದು ನೀರು ಅಮಾಯಕವಾಗಿ ಆಂಧ್ರಪ್ರದೇಶ ತಲುಪುತ್ತಿದೆ. ಹೀಗೆ ಕೂಡಿ ಬಿದ್ದು ಹರಿಯುತ್ತಿರುವ ನೀರನ್ನು ಪೈಪ್ ಲೈನ್ ಮುಖಾಂತರವಾಗಲಿ ಕಾಲುವೆಗಳ ಮುಖಾಂತರವಾಗಲಿ ಐಮಂಗಳ ಹೋಬಳಿಯ ಕೆರೆಗಳಿಗೆ ಹಾಗೂ ಜವಗೊಂಡನಹಳ್ಳಿ ಹೋಬಳಿಯ ಗಾಯತ್ರಿ ಕೆರೆಗೆ ವಾಣಿವಿಲಾಸಸಾಗರ ಜಲಾಶಯದ ನೀರನ್ನು ಏಕೆ ತುಂಬಿಸಬಾರದು ಎಂದು ತಾಲೂಕಿನ ಜನತೆ ಒತ್ತಾಯಿಸುತ್ತಿದ್ದಾರೆ ಎಂದರಲ್ಲದೆ,
ಕಳೆದ 2022ನೇ ಸಾಲಿನಲ್ಲಿ ಕೋಡಿ ಬಿದ್ದಾಗಲೂ ಮೂರು ತಿಂಗಳು ಕೋಡಿ ಹರಿದು ವೇದಾವತಿ ನದಿಯ ಮೂಲಕ ವಾಣಿವಿಲಾಸ ಸಾಗರದ ನೀರು ಆಂಧ್ರಪ್ರದೇಶ ಸೇರಿದ್ದನ್ನು ಈ ಸಮಯದಲ್ಲಿ ಸ್ಮರಿಸಬಹುದು ಎಂಬುದಾಗಿ ಅವರು ಹೇಳಿದ್ದಾರೆ.
