
ಹಿರಿಯೂರು :
ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಕೃಷಿ ಅಭಿವೃದ್ಧಿಯಾಗಬೇಕಾದರೆ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಯಾಗುವ ಮೂಲಕ ಕೃಷಿಕರಿಗೆ ನೆರವಾಗುವಂತಹ ಬಿ.ಎಸ್.ಸಿ.ಅಗ್ರಿಕಲ್ಚರ್ ಕೋರ್ಸ್ ಗಳು ಅತ್ಯಗತ್ಯವಾಗಿವೆ, ಈ ನಿಟ್ಟಿನಲ್ಲಿ ಬಿ.ಎಸ್.ಸಿ.ಅಗ್ರಿಕಲ್ಚರ್ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡಿರುವ ನೀವುಗಳು ಮುಂದೆ ಕೃಷಿ ಅಧಿಕಾರಿಗಳಾದಾಗ ಕೃಷಿಕರ ಮಿತ್ರರಾಗಿ ಕೆಲಸ ಮಾಡಬೇಕು ಎಂಬುದಾಗಿ ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಆಲೂರುಹನುಮಂತರಾಯಪ್ಪ ಹೇಳಿದರು.

ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯಲ್ಲಿ “ಅಗ್ರಿಮಿತ್ರ ಅಕಾಡೆಮಿ” ಹಿರಿಯೂರು ಇವರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೃಷಿ ವಿಜ್ಞಾನ ತರಬೇತಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ವಾಣಿವಿಲಾಸ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ಶ್ರೀಮತಿ ಸೌಮ್ಯ ಮಾತನಾಡಿ, ನೀವೆಲ್ಲಾ ಕೃಷಿಕರ ಮಕ್ಕಳೇ ಆಗಿದ್ದು, ಬಿ.ಎಸ್.ಸಿ.ಅಗ್ರಿಕಲ್ಚರ್ ಕೋರ್ಸ್ ಆಯ್ಕೆ ಮಾಡಿಕೊಳ್ಳುವ ಮೂಲಕ ಕೃಷಿ ಹಾಗೂ ಕೃಷಿಕರ ನೆರವಿಗೆ ಮುಂದಾಗಿರುವ ನಿಮ್ಮ ಮುಂದಿನ ವಿದ್ಯಾಭ್ಯಾಸ ಯಶಸ್ವಿಯಾಗಲಿ, ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಲು ಶ್ರಮವಹಿಸಿರಿ ಎಂಬುದಾಗಿ ಶುಭಹಾರೈಸಿದರು.

ಭೂಮಾಪಕರಾದ ಎಸ್.ನವೀನ್ ಕುಮಾರ್ ಮಾತನಾಡಿ, ಇಂದಿನ ಎಐ ಬಳಕೆಯಿಂದ ಸಾಫ್ಟ್ ವೇರ್ ಕಂಪನಿಗಳು ಮುಚ್ಚಿಹೋಗುತ್ತಿದ್ದು, ಯಾವುದೇ ಕಂಪನಿಗಳು ಮುಚ್ಚಿ ಹೋದರೂ ಕೃಷಿ ಕ್ಷೇತ್ರದ ಉದ್ಯೋಗಗಳು ಮಾತ್ರ ತನ್ನ ಸ್ಥಾನವನ್ನು ಉಳಿಸಿಕೊಂಡಿವೆ, ಈ ನಿಟ್ಟಿನಲ್ಲಿ ನೀವು ಆಯ್ಕೆ ಮಾಡಿಕೊಂಡಿರುವ ಬಿ.ಎಸ್.ಸಿ.ಅಗ್ರಿಕಲ್ಚರ್ ಕೋರ್ಸ್ ಮುಂದಿನ ದಿನಗಳಲ್ಲಿ ಅತ್ಯಂತ ಮುಖ್ಯವಾದ ವೃತ್ತಿಯಾಗಲಿದೆ ಎಂಬುದಾಗಿ ಹೇಳಿದರು.

ಆರಂಭದಲ್ಲಿ ಅಗ್ರಿಮಿತ್ರ ಅಕಾಡೆಮಿ ಹಿರಿಯೂರು ಸಂಸ್ಥಾಪಕರಾದ ಅಸ್ಫಾಕ್ ಹದ್ಲಿ ಕಾರ್ಯಕ್ರಮವನ್ನು ನಿರೂಪಿಸಿ, ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು.ಈ ಕಾರ್ಯಕ್ರಮದಲ್ಲಿ ಭೂಮಾಪಕರಾದ ಎಸ್.ನವೀನ್ ಕುಮಾರ್, ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಆಲೂರು ಹನುಮಂತರಾಯಪ್ಪ, ಮುಖ್ಯಶಿಕ್ಷಕಿ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಶ್ರೀಮತಿ ವಸಂತಾ, ಆಡಳಿತಾಧಿಕಾರಿ ಶ್ರೀಮತಿ ಹೇಮಲತಾ, ಶಿಕ್ಷಕಿಯರಾದ ಶ್ರೀಮತಿ ಭಾಗ್ಯ, ಶ್ರೀಮತಿ ಸುಲೋಚನಾ, ಶಿಕ್ಷಕರಾದ ಶಿವರಾಜ್,ಸೇರಿದಂತೆ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
