
ಹಿರಿಯೂರು:
ತಾಲ್ಲೂಕಿನ ಚಿತ್ರದೇವರಹಟ್ಟಿ ಗ್ರಾಮದ ಬಡ ಕುಟುಂಬದ ರೈತನ ಮಗಳಾದ ಕಾಡುಗೊಲ್ಲ ಬುಡಕಟ್ಟು ಸಮುದಾಯಕ್ಕೆ ಸೇರಿದ ಗಂಗಮ್ಮ ವೈ.ಸಿ.ಅವರು ಪ್ರಾಚೀನ ಇತಿಹಾಸ ಹಾಗೂ ಪುರಾತತ್ವದಂತಹ ಗಂಭೀರ ಸಂಶೋಧನಾ ಕ್ಷೇತ್ರದಲ್ಲಿ ಅಧ್ಯಯನವನ್ನು ಯಶಸ್ವಿಯಾಗಿ ಮಾಡಿರುವುದಕ್ಕೆ ಹಂಪಿ ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ. ಪದವಿ ಲಭಿಸಿದೆ.
ಗಂಗಮ್ಮ ವೈ.ಸಿ. ಅವರು ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ.ಎಸ್.ವೈ. ಸೋಮಶೇಖರ್ ಅವರ ಮಾರ್ಗದರ್ಶನದಲ್ಲಿ ತಮ್ಮ ಮಹಾಪ್ರಬಂಧವನ್ನು ಯಶಸ್ವಿಯಾಗಿ ಮಂಡಿಸಿದ್ದಾರೆ.

ಮಧ್ಯಕಾಲೀನ ಕರ್ನಾಟಕದ ಉದ್ಯಾನವನ ಮತ್ತು ಹೂದೋಟಗಳು , ಸಾಂಸ್ಕೃತಿಕ ಅಧ್ಯಯನ ವಿಜಯನಗರ, ಕಲ್ಬುರ್ಗಿ, ಬೀದರ್, ವಿಜಯಪುರ ಅನುಲಕ್ಷಿಸಿ ಎಂಬ ವಿಷಯದ ಮೇಲೆ ಅವರು ನಡೆಸಿದ ಸಂಶೋಧನೆ ತೋಟಗಾರಿಕೆ ಮತ್ತು ಸಂಸ್ಕೃತಿಯ ನಡುವಿನ ಆಂತರಿಕ ಸಂಬಂಧವನ್ನು ಹೊಸ ದೃಷ್ಠಿಕೋನದಲ್ಲಿ ಆನಾವರಣಗೊಳಿಸಿದೆ.
ಗಂಗಮ್ಮ ಅವರ ಶೈಕ್ಷಣಿಕ ಸಾಧನೆಗೆ ತಂದೆ ಚಿತ್ತಪ್ಪ ವೈ, ತಾಯಿ ಕರಿಯಮ್ಮ, ಹಾಗೂ ಕುಟುಂಬಸ್ಥರು ಅಪಾರ ಸಂತಸ ವ್ಯಕ್ತಡಿಸಿದ್ದಾರೆ. ಗ್ರಾಮದ ಜನರು ಮತ್ತು ಸ್ನೇಹಿತರು ಕೂಡ ಈ ಸಾಧನೆಯನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಹಿರಿಯೂರು ಭಾಗದ ಸಾರ್ವಜನಿಕರು, ಬುಡಕಟ್ಟ ಸಮುದಾಯದ ಮಹಿಳೆಯೊಬ್ಬರು ಇತಿಹಾಸ ಮತ್ತು ಪುರಾತತ್ವ ದಂತಹ ವಿಷಯದಲ್ಲಿ ಪಿ.ಹೆಚ್.ಡಿ. ಪದವಿ ಪಡೆದಿರುವುದು ಇಡೀ ಜಿಲ್ಲೆಗೆ ಹೆಮ್ಮೆಯ ವಿಷಯ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ.
ಸಾಮಾನ್ಯ ಹಿನ್ನಲೆಯ ರೈತ ಕುಟುಂಬದಿಂದ ಬಂದ ಗಂಗಮ್ಮ ಅವರ ಶ್ರಮ, ನಿರಂತರಅಧ್ಯಯನ ಮತ್ತು ಸಂಶೋಧನೆಯ ಮೂಲಕ ಉನ್ನತ ಶಿಖರ ತಲುಪಿರುವುದು ಯುವ ಪೀಳಿಗೆಗೆ ಮಾದರಿಯಾಗಿದೆ. ವಿಶೇಷವಾಗಿ ಗ್ರಾಮೀಣ ಹಾಗೂ ಬುಡಕಟ್ಟು ಸಮುದಾಯದ ವಿದ್ಯಾರ್ಥಿನಿಯರಿಗೆ ಅವರ ಸಾಧನೆ ಪ್ರೇರಣೆಯ ದೀಪವಾಗಲಿದೆ. ಶಿಕ್ಷಣವೇ ಸಾಮಾಜಿಕ ಬದಲಾವಣೆಯ ಪ್ರಮುಖ ಸಾಧನ ಎಂಬುದನ್ನು ಅವರು ಸ್ಪಷ್ಟವಾಗಿ ಸಾಬೀತುಪಡಿಸಿದ್ದಾರೆ.

