
ಹಿರಿಯೂರು:
ಮೈಸೂರಿನ ಕೃಷ್ಣರಾಜಸಾಗರದ ಬೃಂದಾವನದ ರೀತಿಯಲ್ಲಿ ವಾಣಿವಿಲಾಸ ಸಾಗರ ಜಲಾಶಯದ ಪ್ರದೇಶವನ್ನು ಸುಂದರ ತಾಣವನ್ನಾಗಿಸುವುದು ನನ್ನ ಬದ್ಧತೆ ಎಂಬುದಾಗಿ ರಾಜ್ಯದ ಯೋಜನಾ ಮತ್ತು ಸಾಂಖ್ಯಿಕ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಹೇಳಿದರು
ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯದ ಹಿನ್ನೀರಿನಲ್ಲಿ ಭಾನುವಾರ ಸಂಜೆ ಬೆಂಬಲಿಗರೊಂದಿಗೆ ದೋಣಿ ವಿಹಾರದ ಸಂಭ್ರಮ ಅನುಭವಿಸಿದ ನಂತರ ಸುದ್ಧಿಗಾರರ ಜೊತೆ ಅವರು ಮಾತನಾಡಿದರು.

ಚಿತ್ರದುರ್ಗ ಕೋಟೆ ಹೊರತುಪಡಿಸಿದರೆ ವಾಣಿವಿಲಾಸ ಸಾಗರಜಲಾಶಯಕ್ಕಿಂತ ಸುಂದರ ಪ್ರವಾಸಿ ತಾಣ ಮತ್ತೊಂದಿಲ್ಲ. ವರುಣನ ಕೃಪೆ ಹಾಗೂ ಭದ್ರಾ ಯೋಜನೆಯ ನೀರು ಬರುತ್ತಿರುವ ಕಾರಣ ಕಳೆದ ವರ್ಷ ಮತ್ತು ಈ ವರ್ಷ ಸತತವಾಗಿ ಜಲಾಶಯ ಭರ್ತಿಯಾಗುತ್ತಿದೆ. ಎಂದರಲ್ಲದೆ,
1933ರಿಂದ ಜಲಾಶಯ ಭರ್ತಿಯಾಗಿದ್ದನ್ನೇ ನೋಡದ ಜನರಿಗೆ ಇದು ಎಂದೂ ಭರ್ತಿಯಾಗುವುದಿಲ್ಲ ಎಂಬ ಭಾವನೆ ಇತ್ತು. ಆದರೆ, 6 ವರ್ಷದ ಅವಧಿಯಲ್ಲಿ 3ನೇ ಬಾರಿ ಕೋಡಿ ಬೀಳುವುದನ್ನು ನಾಡಿನ ಜನತೆ ಒಂದೆರಡು ದಿನಗಳಲ್ಲಿ ನೋಡಲಿದ್ದಾರೆ ಎಂಬುದಾಗಿ ಅವರು ಹೇಳಿದರು.

ಚಿತ್ರದುರ್ಗ ನಿರ್ಮಿತಿ ಕೇಂದ್ರದಿಂದ ನಿರ್ಮಿಸಿರುವ ವಸತಿಗೃಹ ಹಾಗೂ ಉದ್ಯಾನಗಳನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾರಿಸಿಕೊಳ್ಳಲಾಗುವುದು. ಅರಣ್ಯ ಇಲಾಖೆ ಮೂಲಕ ಪ್ರಕೃತಿ ವನವನ್ನು ಹಿಂದಿನಂತೆ ಬೆಳೆಸಲಾಗುವುದು. ಪ್ರವಾಸೋದ್ಯಮದಲ್ಲಿ ಅನುಭವ ಇರುವವರೊಂದಿಗೆ ಚರ್ಚಿಸಿ ಸೂಕ್ತ ಪ್ರವಾಸಿ ತಾಣವನ್ನಾಗಿಸುವ ಕೆಲಸಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು ಎಂಬುದಾಗಿ ಅವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ. ಸದಸ್ಯರಾದ ಅಮೃತೇಶ್ವರಸ್ವಾಮಿ, ಮುಖಂಡರಾದ ಗರೀಬ್ ಅಲಿ ಮುನ್ನ, ನಗರಸಭೆ ಅಧ್ಯಕ್ಷರಾದ ಆರ್.ಬಾಲಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿರಮೇಶ್, ಈರಲಿಂಗೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್. ನಾಗೇಂದ್ರನಾಯ್ಕ್, ಸ್ಟೀಫನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

