
ಹಿರಿಯೂರು :
ಇತ್ತೀಚಿನ ದಿನಗಳಲ್ಲಿ ಯುವತಿಯರಲ್ಲಿ ಗರ್ಭಕಂಠದ ಕ್ಯಾನ್ಸರ್ ವ್ಯಾಪಕವಾಗಿ ಹರಡುತ್ತಿದ್ದು, ಇದರ ನಿವಾರಣೆಗಾಗಿ ಅಗತ್ಯವಾದ ಸೂಕ್ತಚಿಕಿತ್ಸೆ ತೆಗೆದುಕೊಳ್ಳಬೇಕಲ್ಲದೆ, ವಿದ್ಯಾರ್ಥಿಗಳು ಸದೃಢ ಆರೋಗ್ಯಕ್ಕೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂಬುದಾಗಿ ಸ್ತ್ರೀರೋಗ ತಜ್ಞೆ ಡಾ.ಲತಾ ರಾಮಚಂದ್ರಪ್ಪ ಹೇಳಿದರು.
ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಆರೋಗ್ಯ ದಿನ 2020ರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ರಕ್ತ ತಪಾಸಣೆ ಹಾಗೂ ದೈಹಿಕ, ಮಾನಸಿಕ ಮತ್ತು ಕ್ಯಾನ್ಸರ್ ತಡೆಗಟ್ಟುವ ಕ್ರಮಗಳ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿ, ನಂತರ ಅವರು ಮಾತನಾಡಿದರು.

ಯುವಕರು ನಿರಂತರ ವ್ಯಾಯಾಮ ಯೋಗಭ್ಯಾಸ ಪ್ರಾಣಾಯಾಮ ಮೆಡಿಟೇಶನ್ ನಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ದೇಹ ಮನಸ್ಸು ಮತ್ತು ಸಮಾಜವನ್ನು ಸ್ವಾಸ್ಥ್ಯವಾಗಿಟ್ಟುಕೊಳ್ಳಬೇಕು, ಯುವಕರು ಮಧ್ಯಪಾನ ಧೂಮಪಾನ ಮಾದಕ ವಸ್ತು ಸೇವನೆಯಂತಹ ದುಶ್ಚಟಗಳಿಂದ ದೂರವಿದ್ದು, ಉತ್ತಮ ಆರೋಗ್ಯ ಹೊಂದಬೇಕು ಎಂಬುದಾಗಿ ಹೇಳಿದರು.
ಪ್ರಾಂಶುಪಾಲರಾದ ಡಾ.ಡಿ.ಧರಣೇಂದ್ರಯ್ಯ ಮಾತನಾಡಿ, ಯುವಜನರು ದುಶ್ಚಟಗಳಿಗೆ ಬಲಿಯಾಗದೆ ಸಮಾಜ ಮತ್ತು ದೇಶ ನಿರ್ಮಾಣದ ಕಾರ್ಯದಲ್ಲಿ ಭಾಗಿಯಾಗಬೇಕು ಆದರೆ ಉತ್ತಮ ಮತ್ತು ಸದೃಢ ಆರೋಗ್ಯವನ್ನು ಹೊಂದಿರಬೇಕು, ಸಮಾಜದ ಜನರಲ್ಲಿ ಮಾರಣಾಂತಿಕ ಕಾಯಿಲೆಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಆರೋಗ್ಯವಂತ ಸಮಾಜ ನಿರ್ಮಿಸಬೇಕು ಎಂಬುದಾಗಿ ಹೇಳಿದರು.
ಡಾ.ಆರ್.ಗಂಗಾಧರ್ ಮಾತನಾಡಿ, ಆರೋಗ್ಯ ಎಂದರೆ ಬರೀ ಚಿಕಿತ್ಸೆ ಪಡೆಯುವುದಲ್ಲ ಅದು ದೇಹ ಮನಸ್ಸು ಮತ್ತು ಸಾಮಾಜಿಕ ವಾತಾವರಣವನ್ನು ತಿಳಿಗೊಳಿಸುವ ಒಂದು ವ್ಯವಸ್ಥೆ ಆರೋಗ್ಯವೇ ಸಂಪತ್ತು, ಇಂತಹ ಸಂಪತ್ತನ್ನು ಹೆಚ್ಚಿಸಿಕೊಳ್ಳುವ ಮೂಲಕ ಸಮಾಜದ ಮತ್ತು ದೇಶದ ಆರೋಗ್ಯಕರ ಬೆಳವಣಿಗೆಯಲ್ಲಿ ನಾವೆಲ್ಲ ಭಾಗಿಯಾಗಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ರೆಡ್ ಕ್ರಾಸ್ ನಿರ್ವಹಣಾ ಸಂಸ್ಥೆಯ ನಿರ್ದೇಶಕ ಅನಂತರೆಡ್ಡಿ, ಭಾರತೀಯರ ರೆಡ್ ಕ್ರಾಸ್ ಸಂಸ್ಥೆ ಚೇರ್ಮನ್ ಹೆಚ್.ಎಸ್. ಸುಂದರರಾಜ್, ಚಿತ್ರದುರ್ಗ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಮಜರುಲ್ಲಾ, ಎಂ.ಎಸ್.ರಾಘವೇಂದ್ರ, ಶಶಿಕಲಾರವಿಶಂಕರ್ ಮತ್ತು ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ಸುಮಾರು 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
